ತಿರುವನಂತಪುರಂ: ಲೈಪ್ ಮಿಷನ್ ಯೋಜನೆಯ ಹಗರಣದಲ್ಲಿ ಬಂಧಿತರಾಗಿರುವ ಕೇರಳದ ಮುಖ್ಯಮಂತ್ರಿ ಕಚೇರಿಯ ಮಾಜಿ ಮುಖ್ಯ ಕಾರ್ಯದರ್ಶಿ ಎಂ. ಶಿವಶಂಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಚ್ಚಿಯ ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ವಸ್ಥರಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಮಾರ್ಚ್ 21ರವರೆಗೂ ಅವರು ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
ಕೇರಳ ರಾಜ್ಯ ಸರ್ಕಾರದ ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಲಂಚ ವ್ಯವಹಾರ ಪ್ರಕರಣ ಇದಾಗಿದೆ. ಲೈಫ್ ಮಿಷನ್ ಯೋಜನೆ ಅಡಿಯಲ್ಲಿ ತ್ರಿಶೂರ್ನಲ್ಲಿ 140 ಕುಟುಂಬಗಳಿಗೆ ಮನೆ ನಿರ್ಮಿಸುವ ಯೋಜನೆ ಇದಾಗಿತ್ತು. ಸುಮಾರ ₹18 ಕೋಟಿ ಯೋಜನೆಯಲ್ಲಿ ಶಿವಶಂಕರ್ ಮತ್ತು ಇತರರು ಮೇಲೆ ₹ 4 ಕೋಟಿ ಲಂಚ ಪಡೆದ ಆರೋಪವಿದೆ.
ಈ ಹಗರಣದ ಹಿನ್ನೆಲೆಯಲ್ಲಿ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.