ರಾಯ್ಪುರ: ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಮಾಧ್ಯಮ ಸಿಬ್ಬಂದಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟರೆ ಅವರ ಮಕ್ಕಳು ಇಲ್ಲವೆ ಅವಲಂಬಿತರಿಗೆ ಛತ್ತೀಸ್ಗಡ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನೀಡಲಿದೆ.
ಭಾನುವಾರ ಈ ಬಗ್ಗೆ ಸರ್ಕಾರ ಸೂಚನೆ ಹೊರಡಿಸಿದ್ದು, ಮಾಧ್ಯಮ ಪ್ರತಿನಿಧಿಗಳ ಕಲ್ಯಾಣ ಯೋಜನೆಯಿಂದ ಪರಿಹಾರದ ಮೊತ್ತ ನೀಡಲಾಗುತ್ತದೆ ಎಂದು ಹೇಳಿದೆ.
ಜತೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಧ್ಯಮ ಸಿಬ್ಬಂದಿಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರ ಭರಿಸಲಿದೆ. ಅಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರಿಗೆ ಆಸ್ಪತ್ರೆ ವೆಚ್ಚವನ್ನು ಮರುಪಾವತಿಸಲಿದೆ.
ಜಿಲ್ಲಾ ಸಾರ್ವಜನಿಕ ಸಂಪರ್ಕ ನಿರ್ದೇಶಕರ ಕಚೇರಿಯಿಂದ ನಿಗದಿತ ನಮೂನೆಯನ್ನು ಪಡೆದುಕೊಂಡು, ಅದರಲ್ಲಿ ಅರ್ಜಿ ಸಲ್ಲಿಸಿ, ಅರ್ಹರು ಈ ಸೌಲಭ್ಯ ಪಡೆಯಬಹುದಾಗಿದೆ.