ಭೋಪಾಲ: ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ಎಂಟು ಪ್ರಕರಣಗಳು ಭಾನುವಾರ ಪತ್ತೆಯಾಗಿವೆ.
ಆದರೆ ಓಮೈಕ್ರಾನ್ ಪ್ರಕರಣವನ್ನು ದೃಢೀಕರಿಸುವಲ್ಲಿ ಮಧ್ಯ ಪ್ರದೇಶದ ಬಿಜೆಪಿ ಸರ್ಕಾರವು ವಿಳಂಬ ನೀತಿ ತೋರಿರುವುದನ್ನು ವಿರೋಧ ಪಕ್ಷ ಕಾಂಗ್ರೆಸ್ ಖಂಡಿಸಿದೆ.
ಇಂದೋರ್ನಲ್ಲಿ ವಿದೇಶದಿಂದ ಮರಳಿದ ಎಂಟು ಮಂದಿಯಲ್ಲಿ ಓಮೈಕ್ರಾನ್ ಸೋಂಕು ದೃಢಪಟ್ಟಿವೆ. ಈ ಪೈಕಿ ಆರು ಮಂದಿ ಗುಣಮುಖರಾಗಿ ಹಿಂತಿರುಗಿದ್ದಾರೆ ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ವೈರಾಣು ಸಂರಚನೆ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸಿಂಗ್) ಪ್ರಕ್ರಿಯೆಗೆ ಸಮಯ ತಗಲುತ್ತದೆ. ಇದನ್ನು ದೆಹಲಿಗೆ ರವಾನಿಸಬೇಕಾಗುತ್ತದೆ. ಇದರಿಂದಾಗಿ ಓಮೈಕ್ರಾನ್ ಪ್ರಕರಣಗಳನ್ನು ದೃಢೀಕರಿಸುವುದರಲ್ಲಿ ವಿಳಂಬವಾಗಿದೆ ಎಂದು ಬಿಜೆಪಿ ಸಮರ್ಥಿಸಿದೆ.
ಇತ್ತೀಚೆಗೆ ಇಂದೋರ್ಗೆ ವಿದೇಶದಿಂದ ಸುಮಾರು 3,000 ಮಂದಿ ಆಗಮಿಸಿದ್ದಾರೆ. ಈ ಪೈಕಿ 26 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
'ಎಂಟು ಮಂದಿಯಲ್ಲಿ ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ ಆರು ಮಂದಿ ಚೇತರಿಸಿದ್ದಾರೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರವು ಈ ಮಾಹಿತಿಯನ್ನು ಏಕೆ ಬಚ್ಚಿಟ್ಟಿತ್ತು? ಇದು ಗಂಭೀರವಾದ ಸಮಸ್ಯೆ' ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಮುಖಂಡಕಮಲನಾಥ್ ಆರೋಪಿಸಿದ್ದಾರೆ.
'ಇಂದೋರ್ನಲ್ಲಿ ಓಮೈಕ್ರಾನ್ ಪತ್ತೆಯಾಗಿರುವ ನಡುವೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರು ಗುಂಪು ಸೇರುವಂತೆ ಮಾಡಿದ್ದಾರೆ. ಇಂತಹ ಬಹಿರಂಗ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವರ್ಚ್ಯುವಲ್ಮೂಲಕಆಯೋಜಿಸಬಹುದಿತ್ತು' ಎಂದು ಹೇಳಿದ್ದಾರೆ.