ಮುಂಬೈ (ಪಿಟಿಐ): ಮಹಾರಾಷ್ಟ್ರ ಸರ್ಕಾರವು ಅಕ್ಟೋಬರ್ 8 ರಿಂದ 14 ರವರೆಗೆ ‘ಮಿಷನ್ ಕವಚ ಕುಂಡಲ‘ ಎಂಬ ವಿಶೇಷ ಲಸಿಕಾ ಅಭಿಯಾನ ಆರಂಭಿಸಲಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ಗುರುವಾರ ಹೇಳಿದ್ದಾರೆ.
ಅಕ್ಟೋಬರ್ 15 ರೊಳಗೆ ಕೇಂದ್ರ ಸರ್ಕಾರ 100 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿರುವುದರಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಇದರ ಮೂಲಕ ಪ್ರತಿದಿನ 15 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತೋಪೆ ಸುದ್ದಿಗಾರರಿಗೆ ತಿಳಿಸಿದರು.
ರಾಜೇಶ್ ತೋಪೆ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರೊಂದಿಗೆ ಬುಧವಾರ ಈ ಕುರಿತು ಚರ್ಚೆ ನಡೆಸಿದ್ದರು.
‘ನಾವು ಅಕ್ಟೋಬರ್ 8 ರಿಂದ 14 ರವರೆಗೆ ‘ಮಿಷನ್ ಕವಚ ಕುಂಡಲ’ ಅನ್ನು ಆರಂಭಿಸುತ್ತೇವೆ. ಇದರ ಅಡಿ ನಾವು ಪ್ರತಿದಿನ 15 ಲಕ್ಷ ಜನರಿಗೆ ಲಸಿಕೆ ಹಾಕಲು ಯೋಜಿಸಿದ್ದೇವೆ’ ಎಂದು ಅವರು ಹೇಳಿದರು.
ಕೋವಿನ್ ಆಪ್ ಪ್ರಕಾರ, ಗುರುವಾರ ಮಧ್ಯಾಹ್ನದವರೆಗೆ ದೇಶದಲ್ಲಿ 92.85 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 8.54 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ.