ಅಲಹಾಬಾದ್: ನಿಗೂಢವಾಗಿ ಸಾವನ್ನಪ್ಪಿರುವ ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅವರ ಶವ ಪರೀಕ್ಷೆ ಬುಧವಾರ ಪೂರ್ಣಗೊಂಡಿದ್ದು, ವರದಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಐವರು ವೈದ್ಯರ ತಂಡ ಸುಮಾರು ಎರಡೂವರೆ ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಿತು. ನಂತರ ವರದಿಯನ್ನು ಮೊಹರು ಹಾಕಿದ ಲಕೋಟೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಶವಪರೀಕ್ಷೆ ನಡೆದ ಸ್ಥಳದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ನಂತರ, ಮೃತದೇಹವನ್ನು ಬಾಘಂಬರಿ ಗದ್ದಿ ಮಠಕ್ಕೆ ಕೊಂಡೊಯ್ಯಲಾಯಿತು. ಗಂಗಾ ನದಿಯಲ್ಲಿ ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಧಾರ್ಮಿಕ ವಿಧಿಗಳ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಮಹಂತ ಗಿರಿ ಅವರ ನಿಗೂಢ ಸಾವಿನ ತನಿಖೆಗಾಗಿ ಉತ್ತರಪ್ರದೇಶ ಪೊಲೀಸ್ ಇಲಾಖೆ ಮಂಗಳವಾರ 18 ಸದಸ್ಯರಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ. ತನಿಖೆ ಆರಂಭಿಸಿದ ಈ ತಂಡ, ಹರಿದ್ವಾರದಲ್ಲಿ ಮಹಂತ ಗಿರಿ ಅವರ ಶಿಷ್ಯರೊಬ್ಬರನ್ನು ಬಂಧಿಸಿದೆ.
ಸಾಧು–ಸಂತರ ದೊಡ್ಡ ಸಂಘಟನೆಯೊಂದರ ಅಧ್ಯಕ್ಷರಾಗಿದ್ದ ಮಹಂತ ಅವರು ಭಾನುವಾರ ಪ್ರಯಾಗ್ರಾಜ್ನಲ್ಲಿರುವ ಬಾಘಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.