ನಾಗಪುರ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಖೋಬ್ರಮೇಂಡಾ ಅರಣ್ಯ ಪ್ರದೇಶದಲ್ಲಿ ಸೋಮವಾರ ಬಂಡುಕೋರರ ವಿರುದ್ಧ ಪೊಲೀಸ್ ಕಮಾಂಡೊಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ನಕ್ಸಲ್ ನಿಗ್ರಹ ಪೊಲೀಸ್ ಪಡೆಯವರು ಶನಿವಾರ ಇದೇ ಅರಣ್ಯ ಪ್ರದೇಶದಲ್ಲಿ ರೈಫಲ್ ಮತ್ತು ಮೂರು ಬಾಂಬ್ಗಳನ್ನು ವಶಪಡಿಸಿಕೊಂಡಿದ್ದರು. ‘ನಕ್ಸಲರು ಹೊಂಚು ಹಾಕಿ, ಭದ್ರತಾ ಪಡೆಗಳ ವಿರುದ್ಧ ದಾಳಿ ನಡೆಸುವುದಕ್ಕಾಗಿ ಇದನ್ನೆಲ್ಲ ಬಳಸಲು ಯೋಜಿಸಿದ್ದರು‘ ಎಂದು ಅಧಿಕಾರಿ ತಿಳಿಸಿದ್ದಾರೆ.
‘ನಕ್ಸಲ್ ಸಪ್ತಾಹ‘ದ ಹಿನ್ನೆಲೆಯಲ್ಲಿ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರು ಸೇರುತ್ತಾರೆಂಬ ಮಾಹಿತಿ ಆಧರಿಸಿ ಶನಿವಾರ ಗಡ್ಚಿರೋಲಿ ಪೊಲೀಸ್ ಇಲಾಖೆಯ ವಿಶೇಷ ನಕ್ಸಲ್ ನಿಗ್ರಹ ಪಡೆಯ ಘಟಕದ ‘ಸಿ–60 ಕಮಾಂಡೋಗಳು‘ ಹೆಟಲ್ಕಸ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದರು.
‘ಈ ವೇಳೆ ಕಮಾಂಡೊಗಳ ವಿರುದ್ಧ60 ರಿಂದ 70 ಬಂಡುಕೋರರು ಗುಂಡಿನ ದಾಳಿ ನಡೆಸಿದರು. ಕಮಾಂಡೊಗಳು ಪ್ರತಿ ಗುಂಡಿನ ದಾಳಿ ನಡೆಸಿದರು. ಸುಮಾರು ಒಂದು ಗಂಟೆ ನಡೆದ ಗುಂಡಿನ ಚಕಮಕಿಯ ನಂತರ, ಬಂಡುಕೋರರು ತಮ್ಮ ವಸ್ತುಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.