ಪ್ರಜಾಪ್ರಭುತ್ವದ ಕಗ್ಗೊಲೆ: ಬಿಜೆಪಿಯ 12 ಶಾಸಕರ ಅಮಾನತಿಗೆ ಫಡಣವೀಸ್ ಆಕ್ರೋಶ

ಮುಂಬೈ: ಬಿಜೆಪಿಯ 12 ಶಾಸಕರನ್ನು ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ರಾಜ್ಯದ ಸಂಪ್ರದಾಯಗಳಿಗೆ ವಿರುದ್ಧವಾದದ್ದು ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
‘ಮಹಾ ವಿಕಾಸ್ ಅಘಾಡಿ’ ಸರ್ಕಾರವನ್ನು ‘ತಾಲಿಬಾನ್ ರಾಜ್’ ಮತ್ತು ‘ಮೊಘಲ್ ಸರ್ಕಾರ’ ಎಂದು ಟೀಕಿಸಿರುವ ಅವರು, ನೀವು ‘ನೊ–ಬಾಲ್’ಗೆ ಔಟ್ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ತಕ್ಕ ‘ಸ್ಪಿನ್’ ದಾಳಿ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
‘ಇದು (ಶಿವಸೇನಾ–ಎನ್ಸಿಪಿ–ಕಾಂಗ್ರೆಸ್ ನೇತೃತ್ವದ ಸರ್ಕಾರ) ಮೊಘಲರ ಸರ್ಕಾರವೇ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಇದು ನಮ್ಮ ಪಾಲಿಗೆ ಬೇಸರದ ದಿನ. ಇಂದು ನಡೆದಿರುವುದು ‘ತಾಲಿಬಾನ್ ರಾಜ್’ಗೆ ಉದಾಹರಣೆ ಎಂದು ಫಡಣವೀಸ್ ಹೇಳಿದ್ದಾರೆ.
ಓದಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನುಚಿತ ವರ್ತನೆ ಆರೋಪ: ಬಿಜೆಪಿಯ 12 ಶಾಸಕರ ಅಮಾನತು
ವಿಧಾನಸಭೆ ಸ್ಪೀಕರ್ ಭಾಸ್ಕರ್ ಜಾಧವ್ ಅವರ ಜೊತೆಗೆ ಅವರ ಕಚೇರಿಯಲ್ಲಿಯೇ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದ ಅವಧಿಗೆ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತು ನಿಲುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದ್ದರು. ಸದನ ಇದನ್ನು ಧ್ವನಿಮತದಿಂದ ಅಂಗೀಕರಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.