ಪುಣೆ: ಲೈಂಗಿಕ ಕಿರುಕುಳ ನೀಡಿ ಕತ್ತು ಹಿಸುಕಿ ಹತ್ಯೆಗೈಯ್ಯಲಾಗಿದ್ದ 16 ತಿಂಗಳ ಹೆಣ್ಣು ಮಗುವಿನ ಮೃತದೇಹದೊಂದಿಗೆ ಪ್ರಯಾಣಿಸುತ್ತಿದ್ದ ದಂಪತಿಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸೊಲ್ಲಾಪುರ ನಿಲ್ದಾಣದಲ್ಲಿ ಗುಜರಾತ್ಗೆ ಹೋಗುವ ರೈಲಿನಲ್ಲಿ ಇಬ್ಬರನ್ನು ರೈಲ್ವೆ ಪೊಲಿಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳು ತೆಲಂಗಾಣದ ಸಿಕಂದರಾಬಾದ್ ನಗರದಿಂದ ರಾಜ್ಕೋಟ್ಗೆ ಹೋಗುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮೃತದೇಹವನ್ನು ತಮ್ಮ ಊರಿಗೆ ಕೊಂಡೊಯ್ಯುತ್ತಿದ್ದರು ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಮಗುವಿನ 26 ವರ್ಷದ ತಂದೆ ಜನವರಿ 3 ರಂದು ಸಿಕಂದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಲೈಂಗಿಕ ಕಿರುಕುಳ ನೀಡಿ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ತಾಯಿ ಈ ಅಪರಾಧಕ್ಕೆ ಸಹಾಯ ಮಾಡಿದ್ದಾರೆ. ಪ್ರಯಾಣದ ಸಮಯದಲ್ಲಿ ಮಗು ಯಾವುದೇ ಚಲನವಲನವನ್ನು ತೋರಿಸದಿದ್ದಾಗ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಅನುಮಾನಗೊಂಡರು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
‘ಈ ಬಗ್ಗೆ ಸಹ ಪ್ರಯಾಣಿಕರು ನಂತರ ರೈಲಿನಲ್ಲಿ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದರು. ಬಳಿಕ, ಸೊಲ್ಲಾಪುರ ನಿಲ್ದಾಣದ ರೈಲ್ವೆ ಪೊಲೀಸರಿಗೂ ಮಾಹಿತಿ ಸಿಕ್ಕಿತ್ತೂ’ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ರೈಲ್ವೆ ಪೊಲೀಸ್) ಗಣೇಶ್ ಶಿಂಧೆ ಹೇಳಿದ್ದಾರೆ.
ಸೊಲ್ಲಾಪುರ ರೈಲು ನಿಲ್ದಾಣದಲ್ಲಿ ಇಬ್ಬರನ್ನು ಕೆಳಗಿಳಿಸಿ ವೈದ್ಯಕೀಯ ತಪಾಸಣೆಯ ನಂತರ, ಅಂಬೆಗಾಲಿಡುವ ಮಗು ಸಾವನ್ನಪ್ಪಿದೆ ಎಂದು ಘೋಷಿಸಲಾಯಿತು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ ತಂದೆ ಅವಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ತಿಳಿದುಬಂದಿದೆ. ತಾಯಿ ಕೂಡ ಅಪರಾಧದಲ್ಲಿ ಅವನಿಗೆ ಸಹಾಯ ಮಾಡಿದ್ದಳು. ನಂತರ ಕುಟುಂಬವು ರಾಜ್ಕೋಟ್ಗೆ ಹೋಗುವ ರೈಲು ಹತ್ತಿದ್ದರು. ಅವರು ತಮ್ಮ ಊರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದರು’ ಎಂದು ಶಿಂಧೆ ಹೇಳಿದ್ದಾರೆ.
ದಂಪತಿ ವಿರುದ್ಧ ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಸೊಲ್ಲಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.