ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿಕುರ್ಚಿಯಲ್ಲಿಯೇ ರೋಡ್‌ ಶೋ ನಡೆಸಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಬೀದಿ ಹೋರಾಟಗಾರ್ತಿ’ ಎಂಬ ಹೆಸರಿಗೆ ತಕ್ಕ ಹಾಗೆಯೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ಭಾನುವಾರ ಮತ್ತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಅವರು ಸ್ಪರ್ಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ‘ಹಲ್ಲೆಗೆ ಒಳಗಾಗಿ ಗಾಯಗೊಂಡ’ ನಾಲ್ಕೇ ದಿನದಲ್ಲಿ ಅವರು ಪ್ರಚಾರಕ್ಕೆ ಮರಳಿದ್ದಾರೆ. ಗಾಲಿಕುರ್ಚಿಯಲ್ಲಿ ಬಂದ ಮಮತಾ ಅವರು ರೋಡ್‌ಶೋದಲ್ಲಿ ಪಾಲ್ಗೊಂಡು ‘ಗಾಯಗೊಂಡ ಹುಲಿ ಹೆಚ್ಚು ಅಪಾಯಕಾರಿ’ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡರೊಂದಿಗೆ ಬಂದ ಮಮತಾ ಅವರು ಜನರಿಗೆ ಕೈಮುಗಿದು ಮತ ಯಾಚಿಸಿದರು. ಭದ್ರತಾ ಸಿಬ್ಬಂದಿಯು ಮಮತಾ ಅವರ ಗಾಲಿಕುರ್ಚಿಯನ್ನು ತಳ್ಳಿಕೊಂಡು ಹೋದರು. ಭೂ ಸ್ವಾಧೀನ ವಿರೋಧಿಸಿ ನಂದಿಗ್ರಾಮದಲ್ಲಿ 2007ರಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್‌ ಗೋಲಿಬಾರ್‌ಗೆ 14 ಗ್ರಾಮಸ್ಥರು ಬಲಿಯಾಗಿದ್ದರು. ಅದರ ನೆನಪಿಗೆ ಹಮ್ಮಿಕೊಂಡ ‘ನಂದಿಗ್ರಾಮ ದಿನ’ದ ಭಾಗವಾಗಿ ಐದು ಕಿ.ಮೀ. ರೋಡ್‌ಶೋದಲ್ಲಿ ಮಮತಾ ಭಾಗಿಯಾದರು.

ತಮ್ಮನ್ನು ಗಾಯಗೊಳಿಸಿ, ಪ್ರಚಾರದಿಂದ ದೂರ ಇರಿಸುವ ತಂತ್ರ ವಿಫಲವಾಗಿದೆ ಎಂದು ಮಮತಾ ಹೇಳಿದರು. ಇಡೀ ರಾಜ್ಯದಲ್ಲಿ ಗಾಲಿಕುರ್ಚಿಯಲ್ಲಿ ಸಂಚರಿಸಿ ಟಿಎಂಸಿಯ ಎಲ್ಲ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುವುದಾಗಿ ಅವರು ಘೋಷಿಸಿದರು.

‘ಇಂದು (ಭಾನುವಾರ) ಪ್ರಚಾರಕ್ಕೆ ಹೋಗುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಗಾಯದಿಂದಾಗಿ ಈಗಾಗಲೇ ಕೆಲವು ದಿನಗಳು ನಷ್ಟವಾಗಿವೆ. ಹಾಗಾಗಿ ಭಾನುವಾರವೇ ಪ್ರಚಾರ ಪುನರಾರಂಭಿಸಿದೆ’ ಎಂದು ಮಮತಾ ಹೇಳಿದ್ದಾರೆ.

ನಿರುಂಕುಶಾಧಿಕಾರದ ಮೂಲಕ ಪ್ರಜಾಪ್ರಭುತ್ವವೇ ದಮನವಾಗಿ ಜನರು ಅನುಭವಿಸುವ ವೇದನೆಗಿಂತ ನನ್ನ ನೋವು ದೊಡ್ಡದಲ್ಲ ಎಂದು ಮಮತಾ ಹೇಳಿದ್ದಾರೆ.

‘ಮಮತಾ ಬ್ಯಾನರ್ಜಿ ಬಂಗಾಳದ ಮಗಳು’ ಮತ್ತು ‘ಹೊರಗಿನವರನ್ನು ಸೋಲಿಸೋಣ’ ಎಂದು ಬರೆದಿದ್ದ ಫಲಕಗಳನ್ನು ಟಿಎಂಸಿ ಕಾರ್ಯಕರ್ತರು ಪ್ರದರ್ಶಿಸಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT