ನವದೆಹಲಿ: ಕಳೆದ ಮಾರ್ಚ್ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದ್ದ ತನ್ನ ಯುವಮೋರ್ಚಾ ಕಾರ್ಯಕರ್ತ ಪ್ರದೀಪ್ ತಿವಾರಿಗೆ ಬಿಜೆಪಿ ಈ ಸಲ ಮಹಾನಗರ ಪಾಲಿಕೆ ಟಿಕೆಟ್ ನೀಡಿದೆ.
27 ವರ್ಷದ ಪ್ರದೀಪ್ ತಿವಾರಿ ಕೇಜ್ರಿವಾಲ್ ಅವರ ಸಿವಿಲ್ ಲೈನ್ಸ್ ನಿವಾಸದ ಹೊರಗಿನ ಗೇಟ್ ಮತ್ತು ಸಿಸಿಟಿವಿ ಧ್ವಂಸಗೊಳಿಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಯುವಮೋರ್ಚಾದ 8 ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು.
ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಕೇಜ್ರಿವಾಲ್ ಅವರ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕೇಜ್ರಿವಾಲ್ ನಿವಾಸದ ಗೇಟ್ಗೆ ಕೆಂಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಟೀಕಿಸಿರುವ ಆಪ್, ‘ಬಿಜೆಪಿ ಗೂಂಡಾಗಳನ್ನು ತಯಾರು ಮಾಡುತ್ತಿದೆ ಮತ್ತು ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯಕ್ಕಾಗಿ ಅವರನ್ನು ಅಭಿನಂದಿಸುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ’ ಎಂದು ಹೇಳಿದೆ.
ಮುಂಬರುವ ಪಾಲಿಕೆ ಚುನಾವಣೆಯಲ್ಲಿ ತಿವಾರಿ ರಮೇಶ್ನಗರ ವಾರ್ಡ್ನಿಂದ ನಾಮಪತ್ರ ಸಲ್ಲಿಸಿದ್ದಾರೆ.