ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10 ರಷ್ಟು ಮೀಸಲಾತಿಯನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.
ಅಗ್ನಿವೀರರು ಮೊದಲ ಬ್ಯಾಚ್ ಅಥವಾ ನಂತರದ ಬ್ಯಾಚ್ಗಳ ಭಾಗವಾಗಿದ್ದಾರೆಯೇ ಎಂಬುದರ ಆಧಾರದ ಮೇಲೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನು ಸಚಿವಾಲಯ ಸೂಚಿಸಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968 ಅಡಿ ಮಾಡಿದ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಈ ಆದೇಶ ಹೊರಡಿಸಲಾಗಿದೆ.
ಮಾಜಿ ಅಗ್ನಿವೀರರ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಹಾಗೂ ಇತರ ಬ್ಯಾಚ್ಗಳ ಅಭ್ಯರ್ಥಿಗಳಿಗೆ ಈ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸಲಾಗುವುದು. ಇವರಿಗೆ ದೈಹಿಕ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸಶಸ್ತ್ರ ಪಡೆಗಳಲ್ಲಿ ಯುವಕರು ಸೇವೆ ಸಲ್ಲಿಸಲು ಕಳೆದ ವರ್ಷ ಜೂನ್ 14ರಂದು ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಆರಂಭಿಸಿತ್ತು.