ನವದೆಹಲಿ: ಸಾಲದ ಕಂತು ಮುಂದೂಡುವ ಅವಕಾಶವನ್ನು ಆರು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಕ್ಷೇಪ ವ್ಯಕ್ತಪಡಿಸಿದೆ.
ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿದರೆ ಸಾಲ ಪಾವತಿಸುವ ಶಿಸ್ತು ಹದಗೆಡಲಿದೆ. ಸಾಲದ ಪ್ರಮಾಣ ಹೆಚ್ಚಾಗಿ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅದು ತಿಳಿಸಿದೆ.
ಕೋವಿಡ್–19 ಹಿನ್ನಲೆಯಲ್ಲಿ ವಿವಿಧ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಾಲ ಮರುಪಾವತಿಸುವ ಕುರಿತು ಕೆ.ವಿ. ಕಾಮತ್ ಸಮಿತಿ ಶಿಫಾರಸ್ಸುಗಳ ಬಗ್ಗೆ ವಿವರ ಸಲ್ಲಿಸುವಂತೆ ಅಕ್ಟೋಬರ್ 5ರಂದು ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ಸೂಚಿಸಿತ್ತು. ಹೀಗಾಗಿ, ಆರ್ಬಿಐ ಈ ಪ್ರಮಾಣ ಪತ್ರ ಸಲ್ಲಿಸಿದೆ.
ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವುದು ಆರ್ಥಿಕವಾಗಿ ದುಬಾರಿಯಾಗಲಿದೆ. ಇದರಿಂದ, ಬ್ಯಾಂಕ್ಗಳ ಆರ್ಥಿಕ ಸ್ಥಿರತೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಾತ್ಕಾಲಿಕವಾಗಿ ಸಾಲದ ಕಂತು ಮುಂದೂಡುವುದು ಸಹ ಸಾಲಗಾರರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ.