ಲಖನೌ: ಕಾನ್ಪುರ ದೆಹಾತ್ ಜಿಲ್ಲೆಯಲ್ಲಿ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ತಾಯಿ ಮತ್ತು ಮಗಳು ಸಜೀವಾಗಿ ದಹನವಾದ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಆದೇಶಿಸಿದ್ದಾರೆ.
ಈಗಾಗಲೇ ನಡೆಯುತ್ತಿರುವ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲಾಗುವುದು. ಘಟನೆಯ ಸತ್ಯಾಸತ್ಯತೆಯು ಪಾರದರ್ಶಕವಾಗಿ ಜನರ ಮುಂದೆ ಬರಲಿದೆ. ತನಿಖಾ ವರದಿಗಾಗಿ ಎಲ್ಲರೂ ಕಾಯುಬೇಕು ಅವರು ಹೇಳಿದ್ದಾರೆ.
‘ಅತಿಕ್ರಮಣ ತೆರವು ವೇಳೆ ಪೊಲೀಸರು, ಜಿಲ್ಲಾಡಳಿತ ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮೀಳಾ ದೀಕ್ಷಿತ್ ಮತ್ತು ಅವರ ಮಗಳು ನೇಹಾ ಅವರು ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಸಜೀವವಾಗಿ ದಹನವಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ ಉತ್ತರ ಪ್ರದೇಶ ಮಹಿಳಾ ಕಲ್ಯಾಣ ಸಚಿವೆ ಪ್ರತಿಭಾ ಶುಕ್ಲಾ ಅವರು ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತವನ್ನು ದೂರಿದ್ದಾರೆ. ‘ಗ್ರಾಮಕ್ಕೆ ಭೇಟಿ ನೀಡಿ ವಾಸ್ತವಾಂಶವನ್ನು ತಿಳಿಸುವಂತೆ ಮುಖ್ಯಮಂತ್ರಿಯವರು ನನಗೆ ತಿಳಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.