ದೇವಾಸ್, ಮಧ್ಯಪ್ರದೇಶ: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಕೋಲುಗಳಿಂದ ಥಳಿಸಿ ನಾಯಿಯೊಂದನ್ನು ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರು ಪೌರ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ಜಿಲ್ಲಾ ಕೇಂದ್ರದಿಂದ 110 ಕಿ.ಮೀ. ದೂರದಲ್ಲಿರುವ ಖಟೇಗಾಂವ್ ಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಈ ಘಟನೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಕೋಲುಗಳಿಂದ ಬಡಿದು ನಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯವೆಸಗಿದ ಇಬ್ಬರು ದಿನಗೂಲಿ ನೌಕರರನ್ನು ಸ್ಥಳೀಯ ನಾಗರಿಕ ಸಂಸ್ಥೆಯು ಅಮಾನತುಗೊಳಿಸಿದೆ ಎಂದು ಖಟೇಗಾಂವ್ ನಗರ ಪರಿಷತ್ನ ಮುಖ್ಯ ನಗರ ಪಾಲಿಕೆ ಅಧಿಕಾರಿ (ಸಿಎಂಓ) ಅನಿಲ್ ಜೋಶಿ ಮಾಹಿತಿ ನೀಡಿದರು.
ಇಬ್ಬರೂ ಕಾರ್ಮಿಕರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಾಲೋನಿಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ನಾಯಿಯನ್ನು ಹೊಡೆದು ಕೊಂದಿದ್ದಾರೆ ಎಂದು ಅವರು ಹೇಳಿದರು.
ಐಪಿಸಿ ಸೆಕ್ಷನ್ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂಬಂಧಿತ ನಿಯಮಗಳ ಅಡಿಯಲ್ಲಿ ಇಬ್ಬರೂ ಪೌರ ಕಾರ್ಮಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೂರ್ಯಕಾಂತ್ ಶರ್ಮಾ ಹೇಳಿದರು.