ಔರಂಗಾಬಾದ್, ಮಹಾರಾಷ್ಟ್ರ: ತ್ರಿಪುರಾದಲ್ಲಿ ಇತ್ತೀಚಿಗೆ ನಡೆದ ಕೋಮು ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಎರಡು ದಿನಗಳ ತರುವಾಯ ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.
‘ಘಟನೆಗೆ ಸಂಬಂಧಿಸಿದಂತೆ ನಾಂದೇಡ್ನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ 35 ಮಂದಿಯನ್ನು ನಾಂದೇಡ್ ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಹುತೇಕ ಶಾಂತಿಯುತವಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಶೇವಾಲೆ ತಿಳಿಸಿದರು.
ನಾಂದೇಡ್ನಲ್ಲಿ ಶುಕ್ರವಾರ ಭುಗಿಲೆದ್ದ ಹಿಂಸಾಚಾರದಲ್ಲಿ ಉದ್ರಿಕ್ತ ಗುಂಪು ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದವು.
ವಜೀರಾಬಾದ್ ಪ್ರದೇಶ ಮತ್ತು ನಾಂದೇಡ್ ನಗರದ ದೆಗ್ಲೂರ್ ನಾಕಾದಲ್ಲಿ ಸಹ ಹಿಂಸಾಚಾರ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ತ್ರಿಪುರಾದಲ್ಲಿ ನಡೆದ ಕೋಮು ಹಿಂಸಾಚಾರವನ್ನು ಖಂಡಿಸಿ ಕೆಲವು ಮುಸ್ಲಿಂ ಸಂಘಟನೆಗಳು ಮಹಾರಾಷ್ಟ್ರದ ಅಮರಾವತಿ, ನಾಂದೇಡ್, ಮಾಲೇಗಾಂ (ನಾಸಿಕ್), ವಾಶಿಮ್ ಮತ್ತು ಯವತ್ಮಾಲ್ನ ಅನೇಕ ಸ್ಥಳಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾಗ ಕಲ್ಲು ತೂರಾಟ ನಡೆದಿತ್ತು.