ನವದೆಹಲಿ: ಪಂಜಾಬ್ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ನಡೆದ ದಾಳಿ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ರಾಜ್ಯ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ. ತನಿಖೆ ಆರಂಭಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.
ಎನ್ಐಎಯ ಭಯೋತ್ಪಾದನೆ ತನಿಖಾ ಘಟಕದ ತಂಡವೊಂದು ಪಂಜಾಬ್ ಪೊಲೀಸರ ಜತೆ ಸಂಪರ್ಕದಲ್ಲಿದೆ. ಪಂಜಾಬ್ನಲ್ಲಿ ಖಾಲಿಸ್ತಾನಿ ಗುಂಪುಗಳು ಹೆಚ್ಚುತ್ತಿವೆ ಎಂದು ಬಲವಾಗಿ ನಂಬಿರುವ ಎನ್ಐಎ, ಅದೇ ಗುಂಪುಗಳು ದಾಳಿ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.
ಮೊಹಾಲಿಯ ಸೆಕ್ಟರ್ 77ರಲ್ಲಿರುವ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ಸೋಮವಾರ ರಾತ್ರಿ 7.45ರ ಸುಮಾರಿಗೆ ಗ್ರೆನೇಡ್ ದಾಳಿ ನಡೆದಿತ್ತು. ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ದಾಳಿಗೂ ಮುನ್ನ ಗುಪ್ತಚರ ದಳದ ಪ್ರಧಾನ ಕಚೇರಿ ಹೊರಭಾಗದಲ್ಲಿ ಸ್ವಿಫ್ಟ್ ಡಿಜೈರ್ ಕಾರೊಂದು ಕಾಣಿಸಿತ್ತು ಎನ್ನಲಾಗಿದೆ.