ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕಿ.ಮೀ. ಪರಿಮಿತಿಗೆ ಒಂದೇ ಟೋಲ್ ಪ್ಲಾಜಾ: ನಿತಿನ್ ಗಡ್ಕರಿ

Last Updated 22 ಮಾರ್ಚ್ 2022, 19:17 IST
ಅಕ್ಷರ ಗಾತ್ರ

ನವದೆಹಲಿ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 60 ಕಿ.ಮೀ ಮಿತಿಯಲ್ಲಿ ಒಂದು ಟೋಲ್‌ ಪ್ಲಾಜಾ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿ ಇದ್ದಲ್ಲಿ ಮುಂದಿನ ಮೂರು ತಿಂಗಳಲ್ಲಿ ಅವುಗಳನ್ನು ತೆಗೆಯಲಾಗುವುದು’ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಅವರು ಮಂಗಳವಾರ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದರು. ‘ಗರಿಷ್ಠ 8 ಪ್ರಯಾಣಿಕರು ಇರುವ ವಾಹನನಗಳಲ್ಲಿ ಸುರಕ್ಷತೆಗೆ ಒತ್ತುನೀಡಲು, ಅಂಥ ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ ಇರುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.

‘ವಿದ್ಯುತ್‌ ಚಾಲಿತ ವಾಹನಗಳ ದರ ಎರಡು ವರ್ಷದಲ್ಲಿ ಇಳಿಕೆ’: ತಂತ್ರಜ್ಞಾನದ ಪ್ರಗತಿಯಿಂದಾಗಿ ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ವೆಚ್ಚವು ತಗ್ಗಲಿದ್ದು, ಎರಡು ವರ್ಷದಲ್ಲಿ ಪೆಟ್ರೋಲ್‌ ಆಧರಿತ ವಾಹನಗಳಿಗೆ ಸಮನಾಗಿ ಇರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ‘ಎರಡು ವರ್ಷದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌, ಕಾರು, ಆಟೊರಿಕ್ಷಾಗಳ ದರವು ಪೆಟ್ರೋಲ್‌ ಆಧರಿತ ವಾಹನಗಳಿಗೆ ಸರಿಸಮಾನವಾಗಿ ಇರಲಿದೆ. ಲಿಥಿಯಂ ಐಯಾನ್ ಬ್ಯಾಟರಿ ದರವೂ ಭವಿಷ್ಯದಲ್ಲಿ ಇಳಿಕೆಯಾಗಲಿದೆ’ ಎಂದು ತಿಳಿಸಿದರು.

ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ‘ಝಿಂಕ್‌ ಐಯಾನ್‌, ಅಲ್ಯುಮೀನಿಯಂ ಐಯಾನ್‌, ಸೋಡಿಯಂ ಐಯಾನ್‌ ಬ್ಯಾಟರಿಗಳ ಸಂಯೋಜನೆಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಪೆಟ್ರೋಲ್‌ಗೆ ನೀವು ₹ 100 ವ್ಯಯಿಸುತ್ತಿದ್ದಲ್ಲಿ, ವಿದ್ಯುತ್‌ ಚಾಲಿತ ವಾಹನ ಬಳಕೆಗೆ ₹ 10 ವ್ಯಯವಾಗಲಿದೆ’ ಎಂದರು. ಇದೇ ಸಂದರ್ಭದಲ್ಲಿ ಅವರು ‘ಆರ್ಥಿಕ ಮಿತವ್ಯಯಿಯಾದ ದೇಶಿ ಇಂಧನಕ್ಕೆ ನಾವು ಬದಲಾಗಬೇಕಿದೆ. ಶೀಘ್ರದಲ್ಲೇ ಇಂತಹ ಇಂಧನ ಸಾಕಾರವಾಗಲಿದೆ’ ಎಂದರು.

ಸಾರಿಗೆ ಉದ್ದೇಶಕ್ಕಾಗಿ ಹೈಡ್ರೋಜನ್‌ ಟೆಕ್ನಾಲಜಿ ಬಳಸಲು ಸಂಸದರು ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಪರಿಸರಸ್ನೇಹಿಯಾದ ಜಲಜನಕ ಉತ್ಪಾದನೆಗೆ ಕೊಳಚೆ ನೀರು ಸಂಸ್ಕರಿಸಲು ತಮ್ಮ ಕ್ಷೇತ್ರಗಳಲ್ಲಿ ಕ್ರಮವಹಿಸಬೇಕು ಎಂದೂ ಮನವಿ ಮಾಡಿದರು.

ಜಲಜನಕವು ಶೀಘ್ರದಲ್ಲಿಅತ್ಯಂತ ಅಗ್ಗವಾದ ಪರ್ಯಾಯ ಇಂಧನ ಮೂಲವಾಗಲಿದೆ ಎಂದು ಗಡ್ಕರಿ ಅವರು ಪ್ರತಿಪಾದಿಸಿದರು.

ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಕೆ ಮುಂದುವರಿಕೆ
ಕೇಂದ್ರ ಸರ್ಕಾರ ‘ಬೆಲೆ ಏರಿಕೆಯ ನಡುವೆಯೂ ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸುವುದನ್ನು ಮುಂದುವರಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

‘ಪ್ರತಿ ಚೀಲಕ್ಕೆ ₹ 1,200ರಷ್ಟು ಬೆಲೆ ಏರಿದಾಗಲೂ ಕೇಂದ್ರ ಸರ್ಕಾರವು ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯುವಂತೆ ಮಾಡಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಎಐಎಂಐಎಂ ಸದಸ್ಯ ಇಮ್ತಿಯಾಜ್ ಜಲೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೈಲಾಶ್ ಅವರು, ‘ಪ್ರತಿ ಚೀಲಕ್ಕೆ ₹ 600ರಷ್ಟು ಸಬ್ಸಿಡಿ ಇದೆ. ಇಂದು ಪ್ರತಿ ಚೀಲ ರಸಗೊಬ್ಬರದ ಮೇಲೆ ₹ 4,200ಕ್ಕೆ ತಲುಪಿದೆ. ಆದರೂ, ಕೇಂದ್ರ ಸರ್ಕಾರ ₹ 2,600ರಷ್ಟು ಸಬ್ಸಿಡಿ ನೀಡುವ ಮೂಲಕ ಪ್ರತಿ ಚೀಲಕ್ಕೆ ₹ 1,200 ದರದಲ್ಲಿ ರೈತರಿಗೆ ಪೂರೈಸುತ್ತಿದೆ. ಅಗತ್ಯವಿದ್ದಾಗ, ಎಲ್ಲಿಂದ ತರಬೇಕಾದರೂ ರೈತರಿಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT