ಕೊಚ್ಚಿ: ಪಕ್ಷದ ಕೇರಳ ಘಟಕದ ಯಾರೊಂದಿಗೂ ಅಸಮಾಧಾನವಾಗಲೀ ಸಿಟ್ಟಾಗಲೀ ಇಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಭಾನುವಾರ ಹೇಳಿದ್ದಾರೆ.
ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪರಸ್ಪರ ಮಾತನಾಡುವುದನ್ನು ತಡೆಯಲು ನಾವೇನು ಶಿಶುವಿಹಾರದಲ್ಲಿಲ್ಲ’ ಎಂದಿದ್ದಾರೆ.
‘ನಾನು ಪಕ್ಷದ ಯಾರ ವಿರುದ್ಧವೂ ಮಾತನಾಡಿಲ್ಲ ಮತ್ತು ಪಕ್ಷದ ನಿರ್ದೇಶನಗಳನ್ನು ಅಲ್ಲಗಳೆದಿಲ್ಲ. ಆದರೂ ವಿವಾದಗಳು ಯಾಕೆ ಸೃಷ್ಟಿಯಾಗಿವೆ ಎಂಬುದು ತಿಳಿದಿಲ್ಲ’ ಎಂದೂ ತಿಳಿಸಿದ್ದಾರೆ.
ಶಶಿ ತರೂರು ಅವರು ಈಚೆಗೆ ನಡೆಸಿರುವ ಮಲಬಾರ್ ಪ್ರವಾಸಕ್ಕೆ ಪಕ್ಷದೊಳಗಿನ ವಿಭಾಗವೊಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
‘ಪಕ್ಷದೊಳಗೆ ಭಿನ್ನಮತಕ್ಕೆ ಆಸ್ಪದವಿಲ್ಲ. ಇಂತಹ ಚಟುವಟಿಕೆ ನಡೆಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಕೇರಳ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಈಚೆಗೆ ತರೂರ್ ಅವರ ಹೆಸರು ಪ್ರಸ್ತಾಪಿಸದೆ ಎಚ್ಚರಿಕೆ ಕೂಡ ನೀಡಿದ್ದರು.