ಚಂಡೀಗಡ: ಭಾರತ ಹಿಂದುಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅನಿಲ್ ವಿಜ್, ‘ಯಾರು ಹಿಂದುತ್ವವಾದಿಯಲ್ಲವೋ ಆತ ಹಿಂದುವಾಗಿದ್ದರೂ ಹಿಂದುವಲ್ಲ,’ ಎಂದಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಭಾರತವು ಹಿಂದುಗಳ ದೇಶ, ಹಿಂದುವಾದಿಗಳದ್ದಲ್ಲ,’ ಎಂದು ಹೇಳಿದ್ದರು. ‘ಹಿಂದುತ್ವವಾದಿಗಳನ್ನು ಅಧಿಕಾರದಿಂದ ಹೊರದಬ್ಬಿ, ಹಿಂದುಗಳನ್ನು ಮತ್ತೆ ಆ ಸ್ಥಾನದಲ್ಲಿ ಕೂರಿಸಬೇಕು’ ಎಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್, ‘ಯಾರು ಹಿಂದುತ್ವವಾದಿಯಲ್ಲವೋ, ಆತ ಹಿಂದುವಾಗಿದ್ದರೂ ನಕಲಿಯೇ,’ ಎಂದಿದ್ದಾರೆ.
ದೇಶದಲ್ಲಿ ಹಣದುಬ್ಬರ ಮತ್ತು ಅದಕ್ಕೆ ಸಂಬಂಧಿಸಿದ್ದ ಸಂಕಷ್ಟದ ಪರಿಸ್ಥಿತಿ ಎಂಬುದು ಇದ್ದರೆ ಅದು ಹಿಂದುತ್ವವಾದಿಗಳು ಸೃಷ್ಟಿ ಮಾಡಿದ್ದು ಎಂದು ರಾಹುಲ್ ಕಿಡಿಕಾರಿದ್ದರು.
ಅಲ್ಲದೆ, ‘ಗಾಂಧಿ ಹಿಂದುವಾದರೆ, ಗೋಡ್ಸೆ ಹಿಂದುತ್ವವಾದಿ’ ಎಂದು ಹೇಳಿದ್ದರು.