ಕೋಲ್ಕತ್ತ: ದೀಪಾವಳಿ ಅಮಾವಾಸ್ಯೆಯ ದಿನವಾದ ಇದೇ 25ರಂದು ಸಂಜೆ ವೇಳೆಗೆ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ದೇಶದ ಹಲವು ಭಾಗಗಳಲ್ಲಿ ಗ್ರಹಣ ಗೋಚರಿಸುತ್ತದೆ ಎಂದು ಖಗೋಳಶಾಸ್ತ್ರಜ್ಞ ದೇವಿ ಪ್ರಸಾದ್ ದುರೈ ತಿಳಿಸಿದ್ದಾರೆ.
ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಉತ್ತಮ ರೀತಿಯಲ್ಲಿ ಗೋಚರಿಸುತ್ತದೆ. ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆಗ್ರಹಣ ಸಂಭವಿಸಲಿದೆ. ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಗ್ರಹಣ ಸಂಭವಿಸುವ ಕಾರಣ ಈ ಭಾಗಗಳಲ್ಲಿ ಗ್ರಹಣ ಕಾಣಿಸದು ಎಂದು ಅವರು ಹೇಳಿದ್ದಾರೆ.
ಗ್ರಹಣದ ಗರಿಷ್ಠ ಗೋಚರತೆ ವೇಳೆ, ಅಸ್ತಂಗತವಾಗುತ್ತಿರುವ ಸೂರ್ಯನ ಬಿಂಬದ ಶೇ 4ರಷ್ಟು ಭಾಗವನ್ನು ಚಂದ್ರಬಿಂಬವು ಮುಚ್ಚಲಿದೆ ಎಂದು ಅವರು ಹೇಳಿದ್ದಾರೆ.
ಭಾರತವಲ್ಲದೇ ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಹ ಗ್ರಹಣ ಗೋಚರಿಸಲಿದೆ.
ಬೆಂಗಳೂರಿನಲ್ಲಿ ಸಂಜೆ 5.12ಕ್ಕೆ ಗ್ರಹಣ ಆರಂಭವಾಗಿ, 5.49ಕ್ಕೆ ಗರಿಷ್ಠ ಮಟ್ಟವನ್ನು ತಲುಪಲಿದೆ ಹಾಗೂ 5.55ರ ವೇಳೆಗೆ ಮುಕ್ತಾಯವಾಗಲಿದೆ.
ಗ್ರಹಣದ ವೇಳೆ ಸೂರ್ಯಕಿರಣಗಳು ಕಣ್ಣುಗಳಿಗೆ ಅಪಾಯಕಾರಿ ಆಗಿರುವ ಕಾರಣ ಗ್ರಹಣ ನೋಡಲು ಇಚ್ಛಿಸುವವರು ಅತ್ಯಂತ ಹೆಚ್ಚು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು ಎಂದು ದುರೈ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.