ನವದೆಹಲಿ: ಕೋವಿಡ್ ಪ್ರಕರಣಗಳು ಏರುಗತಿಯಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿ, ಪರಿಸ್ಥಿತಿಯ ವಿವರ ಪಡೆದರು.
ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಉದ್ಧವ್ ಠಾಕ್ರೆ (ಮಹಾರಾಷ್ಟ್ರ), ಭೂಪೇಶ್ ಬಘೇಲ್ (ಛತ್ತೀಸಗಡ) ಮತ್ತು ವಿಜಯ್ ರೂಪಾಣಿ (ಗುಜರಾತ್) ಅವರು ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.
ಈ ನಡುವೆ, ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದ್ದರೂ, ಹಲವು ನಗರಗಳಲ್ಲಿ ಏರುಗತಿಯಲ್ಲಿದೆ. ಹೀಗಾಗಿ, ಕರ್ಫ್ಯೂ ಜಾರಿ ಸೇರಿ ಕೆಲವು ನಿಯಂತ್ರಣ ಕ್ರಮಕ್ಕೆ ಸರ್ಕಾರಗಳು ಮುಂದಾಗಗಿವೆ.
ಅಲ್ಲದೆ, ಪ್ರಧಾನಮಂತ್ರಿ ಅವರು ಕೋವಿಡ್ ಲಸಿಕೆ ವಿತರಣೆ ಕಾರ್ಯತಂತ್ರ ಕುರಿತಂತೆಯೂವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆಗೂ ಚರ್ಚಿಸಿದರು.
ಭಾರತದಲ್ಲಿ ಐದು ವಿವಿಧ ಲಸಿಕೆಗಳು ಪ್ರಯೋಗ ನಡೆಯುತ್ತಿದೆ. ಇವುಗಳಲ್ಲಿ ನಾಲ್ಕು ಲಸಿಕೆಗಳು 2 ಮತ್ತು 3ನೇ ಹಂತದಲ್ಲಿ ಇದ್ದರೆ, ಒಂದು ಲಸಿಕೆಯು 1 ಮತ್ತು 2ನೇ ಹಂತದಲ್ಲಿದೆ.
ಈ ಮಧ್ಯೆ, ಮಂಗಳವಾರ 37,975 ಕೋವಿಡ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 91.77 ಲಕ್ಷಕ್ಕೆ ಏರಿದೆ. ಚೇತರಿಸಿಕೊಂಡವರ ಸಂಖ್ಯೆ 86 ಲಕ್ಷವಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.