ಕೆವಾಡಿಯಾ (ಗುಜರಾತ್): ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ145ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಟೇಲ್ ಅವರನ್ನು ಸ್ಮರಿಸಿದ್ದಾರೆ.
ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿರುವ ಮೋದಿ, ಶನಿವಾರ ನರ್ಮದಾ ಜಿಲ್ಲೆಯ ಕೆವಾಡಿಯಾಗೆ ಭೇಟಿ ನೀಡಿದರು. ಇಲ್ಲಿ ನಿರ್ಮಾಣಗೊಂಡಿರುವ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಗೆ ಪುಷ್ಪಗಳನ್ನು ಸಮರ್ಪಿಸಿದರು. ಇದೇ ವೇಳೆ ಹೆಲಿಕಾಪ್ಟರ್ ಮೂಲಕ ಪ್ರತಿಮೆ ಮೇಲೆ ಹೂ ಮಳೆ ಸುರಿಸಲಾಯಿತು. ನಂತರ ಕವಾಯತು ಮೈದಾನದತ್ತ ಸಾಗಿದ ಮೋದಿ, ರಾಷ್ಟ್ರೀಯ ಏಕತಾ ದಿನದ ಹಿನ್ನೆಲೆಯಲ್ಲಿ ಅಲ್ಲಿ ನೆರೆದಿದ್ದವರಿಗೆ ‘ರಾಷ್ಟ್ರೀಯ ಏಕತೆಯ ಪ್ರತಿಜ್ಞೆ’ಯನ್ನು ಬೋಧಿಸಿದರು.
ಪಟೇಲ್ ಅವರ ಜನ್ಮದಿನವನ್ನು 2014ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶುಕ್ರವಾರ ಮೋದಿ ಅವರು ಆರೋಗ್ಯ ವನ, ಏಕತಾ ಮಾಲ್, ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್, ಸರ್ದಾರ್ ಪಟೇಲ್ ಜಂಗಲ್ ಸಫಾರಿ, ದೋಣಿ ವಿಹಾರ ಸೇರಿದಂತೆ ಒಟ್ಟು17 ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದರು.