ನವದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಮಂಡಿಸಿದ್ದ ನಿರ್ಣಯಗಳ ಮೇಲೆ ಮತದಾನ ನಡೆಯುವ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಪಕ್ಷದ ಸಂಸದರ ಕುರಿತ ವಿವರಗಳನ್ನು ಸಲ್ಲಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೂಚಿಸಿದ್ದಾರೆ.
ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಈ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.
‘ನ್ಯಾಯಮಂಡಳಿಗಳ ಸುಧಾರಣಾ ಮಸೂದೆ’ಯನ್ನು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿ, ವಿರೋಧ ಪಕ್ಷಗಳ ಕೆಲ ಸದಸ್ಯರು ಸೋಮವಾರ ನಿರ್ಣಯ ಮಂಡಿಸಿದ್ದರು. ಆದರೆ, ನಿರ್ಣಯವನ್ನು ಸದನ ತಿರಸ್ಕರಿಸಿತು.
ಒಲಿಂಪಿಕ್ಸ್ನಲ್ಲಿ ಅಸಾಧಾರಣ ಪ್ರತಿಭೆ ಮೆರೆದು, ಪದಕಗಳನ್ನು ಗೆದ್ದವರಿಗೆ ಸಭೆಯಲ್ಲಿ ಪಾಲ್ಗೊಂಡಿದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿ, ಅಭಿನಂದಿಸಿದರು.
‘ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಿಮ್ಮ ಕ್ಷೇತ್ರದ ಜನರಿಗೆ ಪ್ರೋತ್ಸಾಹ ನೀಡಬೇಕು. ಪೋಷಣ್ ಅಭಿಯಾನ್ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು’ ಎಂದು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು.