ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಾಗಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ‘ವಾರ್ ರೂಂ’ಗಳನ್ನು ಸ್ಥಾಪಿಸುವ ಇಂಗಿತವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಘಟಕದ ಮುಖಂಡರೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಅವರು ಈ ವಿಚಾರವನ್ನು ಮಂಡಿಸಿದರು.
‘ವಾರ್ ರೂಮ್ಗಳ ಸ್ಥಾಪನೆಯಿಂದ ಬೇರು ಮಟ್ಟದಿಂದ ಪ್ರತಿಕ್ರಿಯೆ ಸಿಗಲಿದೆ. ಇದರಿಂದ ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಂಡು, ಪಕ್ಷ ಸಂಘಟನೆ ಬಲಪಡಿಸಲು ಅನುಕೂಲವಾಗುತ್ತದೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಅಗತ್ಯ’ ಎಂದು ಅವರು ಸಭೆಯಲ್ಲಿ ಹೇಳಿದರು.
ಉದ್ದೇಶಿತ ‘ಪ್ರತಿಜ್ಞಾ ಯಾತ್ರಾ’ ಹಾದು ಹೋಗುವ ಮಾರ್ಗ, ಬೂತ್ಗಳ ನಿರ್ವಹಣೆ ಹಾಗೂ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.