ಜೈಪುರ: ಹಳೆ ಪಿಂಚಣಿ ಯೋಜನೆ(ಒಪಿಎಸ್) ಮರು ಜಾರಿ ನಿರ್ಧಾರ ಕುರಿತಂತೆ ರಾಜಸ್ಥಾನ ಸರ್ಕಾರವು ದೃಢವಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಬುಧವಾರ ಹೇಳಿದ್ದಾರೆ.
ನೌಕರರು ರಾಜ್ಯ ಸರ್ಕಾರದ ಅವಿಭಾಜ್ಯ ಅಂಗವಾಗಿದ್ದು, ಸರ್ಕಾರದ ಯೋಜನೆಗಳನ್ನು ಕೆಳ ಹಂತದವರೆಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನೌಕರರು ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
ನೌಕರರ ಸಂಘಗಳ ಜೊತೆ ಬಜೆಟ್ ಪೂರ್ವ ಮಾತುಕತೆ ವೇಳೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ನೌಕರರ ಹಿತದೃಷ್ಟಿಯಿಂದ ತಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮುಂಬರುವ ಬಜೆಟ್ನಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬ ಬಗ್ಗೆ ಅವರು, ನೌಕರರ ಸಂಘಗಳಿಂದ ಸಲಹೆ ಕೇಳಿದರು.
‘ರಾಜ್ಯ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ನೌಕರರ ಕಲ್ಯಾಣಕ್ಕಾಗಿ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಂಡಿದೆ. ನೌಕರರ ಭವಿಷ್ಯದ ಭದ್ರತೆಯ ದೃಷ್ಟಿಯಿಂದ, ಸರ್ಕಾರವು ಒಪಿಎಸ್ ಅನ್ನು ಮರು ಜಾರಿಗೊಳಿಸಿದೆ' ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಪಿಎಸ್ ಜಾರಿಯಿಂದ ನೌಕರರು ಭವಿಷ್ಯದ ಚಿಂತೆಯಿಂದ ಮುಕ್ತರಾಗಿ ಜವಾಬ್ದಾರಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಗೆಹಲೋತ್ ಹೇಳಿದ್ದಾರೆ.