ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲ್ಲಲು ಯತ್ನಿಸಿದ ಆರೋಪಿ

Last Updated 5 ಮಾರ್ಚ್ 2021, 11:31 IST
ಅಕ್ಷರ ಗಾತ್ರ

ಜೈಪುರ: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಘಟನೆ ರಾಜಸ್ಥಾನದ ಹನುಮಾನ್‌ಘರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.

‘ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಸಂತ್ರಸ್ತ ಯುವತಿಯನ್ನು ಬಿಕಾನೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 2018ರಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯೇ ಆಕೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿ ಪ್ರದೀಪ್ ವಿಷ್ಣೋಯ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಗೋಲಾಪುರ ಪೊಲೀಸ್ ಠಾಣಾಧಿಕಾರಿ ಓಂಪ್ರಕಾಶ್ ಮಾಹಿತಿ ನೀಡಿದ್ದಾರೆ.

‘ಈ ಘಟನೆಯು ಗುರುವಾರ ಮುಂಜಾನೆ ನಡೆದಿದೆ. ಗಂಡನ ಜೊತೆಗಿನ ವೈಮನಸ್ಸಿನಿಂದಾಗಿ ಸಂತ್ರಸ್ತೆಯು ತನ್ನ ಮಗಳೊಂದಿಗೆ ತನ್ನ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಗುರುವಾರ ಮುಂಜಾನೆಯೇ ಮನೆಯೊಳಗೆ ಪ್ರವೇಶಿಸಿದ್ದ ಆರೋಪಿ, ಮನೆಯ ನೆಲದ ಮೇಲೆ ಸೀಮೆಎಣ್ಣೆಯನ್ನು ಚೆಲ್ಲಿದ್ದಾನೆ. ನಂತರ ಹೊರಗಿನಿಂದ ಬಾಗಿಲು ಮುಚ್ಚಿದ ಆರೋಪಿ ಬಾಗಿಲು ಬಡಿದು ಸಂತ್ರಸ್ತೆಯ ಹೆಸರನ್ನು ಕೂಗಿ ಕರೆದಿದ್ದಾನೆ. ಸಂತ್ರಸ್ತೆ ಬಾಗಿಲು ತೆರೆಯುತ್ತಿದ್ದಂತೆಯೇ ಆರೋಪಿ ಉರಿಯುತ್ತಿರುವ ಕಟ್ಟಿಗೆಯನ್ನು ನೆಲದ ಮೇಲೆ ಬಿಸಾಡಿದ್ದಾನೆ. ಸ್ಥಳದಲ್ಲಿದ್ದ ಸಂತ್ರಸ್ತೆಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾಳೆ’ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರದೀಪ್ ವಿಷ್ಣೋಯಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ಅಜ್ಜಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

2018ರಲ್ಲಿ ಸಂತ್ರಸ್ತೆಯು ಆರೋಪಿ ಪ್ರದೀಪ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವು ಇನ್ನೂ ವಿಚಾರಣೆಯ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT