ಮುಂಬೈ: ವೈದ್ಯಕೀಯ ಕಾರಣಕ್ಕೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿರುವಭೀಮಾ–ಕೊರೆಗಾಂವ್ ಪ್ರಕರಣದ ಆರೋಪಿ ಸಾಮಾಜಿಕ ಹೋರಾಟಗಾರ, ಕವಿ ಪಿ.ವರವರರಾವ್ ಮುಂಬೈನಲ್ಲೇ ನೆಲೆಸಬೇಕು, ಅನುಮತಿ ಇಲ್ಲದೆ ನಗರ ಬಿಟ್ಟು ಹೋಗದಂತೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ.
ಮುಂಬೈನ ತಮ್ಮ ನಿವಾಸದಲ್ಲಿ ಸಂದರ್ಶಕರ ಸಭೆ ನಡೆಸುವುದನ್ನು ನಿರ್ಬಂಧಿಸಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಪ್ರಕರಣಕ್ಕೆ ಸಂಬಂಧಿಸಿದ ಸಹ ಆರೋಪಿಗಳನ್ನು ಸಂಪರ್ಕಿಸದಂತೆ ಸೂಚಿಸಿದೆ.
ಆ.10 ರಂದು ಸುಪ್ರೀಂ ಕೋರ್ಟ್ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅವರ ಜಾಮೀನು ಷರತ್ತುಗಳನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ)ಗೆ ಸಂಬಂಧಿಸಿದ ವಿಶೇಷ ಕೋರ್ಟ್ ವಿಚಾರಣೆ ಸಂದರ್ಭ ನಿಗದಿ ಮಾಡಿದ್ದು,ಅದರ ವಿವರಗಳು ಶನಿವಾರ ಲಭ್ಯವಾಗಿವೆ.
ಎನ್ಐಎ ನ್ಯಾಯಾಲಯದ ಅನುಮತಿ ಇಲ್ಲದೆ ನಗರ ಬಿಟ್ಟು ಹೋಗುವಂತಿಲ್ಲ. ತಾವು ವಾಸವಿರುವ ನಿವಾಸದ ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ, ಮೂವರು ನಿಕಟ ಸಂಬಂಧಿಗಳು ಮತ್ತು ಅವರೊಂದಿಗೆ ವಾಸವಿರುವ ವ್ಯಕ್ತಿಗಳ ಸಂಪರ್ಕ ಸಂಖ್ಯೆ ನೀಡಬೇಕು.ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸೂಚಿಸಿದೆ.