ಪಟ್ನಾ: ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಅವರು ಗುರುವಾರ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷವನ್ನು ತೊರೆದಿದ್ದಾರೆ. ಇದರಿಂದ ಬಿಹಾರ ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿರುವ ಆರ್ಜೆಡಿಗೆ ಅಲ್ಪ ಹಿನ್ನಡೆ ಉಂಟಾಗಿದೆ.
ಈ ಸಂಬಂಧ ರಘುವಂಶ್ ಅವರು ಆರ್ಜೆಡಿ ನಾಯಕ ಲಾಲು ಪ್ರಸಾದ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
‘ಜನ್ನಾಯಕ್ ಕರ್ಪೂರಿ ಠಾಕೂರ್ ಅವರ ನಿಧನದ ದಿನದಿಂದಲೂ (32 ವರ್ಷಗಳಿಂದ) ನಾನು ನಿಮ್ಮ ಬೆನ್ನಿಗೆ ನಿಂತಿದ್ದೇನೆ. ಇನ್ನು ಮುಂದೆ ಅದು ಸಾಧ್ಯವಿಲ್ಲ’ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ನನಗೆ ಜನ ಸಾಮಾನ್ಯರ ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದಲೂ ಅಪಾರ ಪ್ರೀತಿ ವಿಶ್ವಾಸ ಸಿಕ್ಕಿದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಎಂದೂ ಅವರು ಬರೆದಿದ್ದಾರೆ.
74 ವರ್ಷ ವಯಸ್ಸಿನ ರಘುವಂಶ್ ಅವರು ಜೂನ್ನಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಲಾಲು ಪ್ರಸಾದ್ ಅವರು ಮನವೊಲಿಸಿದ ಬಳಿಕ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು.