ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ, ಹಿರಿಯ ಪತ್ರಕರ್ತ ಎನ್.ರಾಮ್, ವಕೀಲ ಪ್ರಶಾಂತ್ ಭೂಷಣ್ ಅವರಿಗೆ, ನ್ಯಾಯಾಂಗ ನಿಂದನೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದ ಅರ್ಜಿ ವಾಪಸು ತೆಗೆದುಕೊಳ್ಳಲು ಸುಪ್ರಿಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರಾಜೀವ್ ಧವನ್ ಅವರಿಗೆ, ಕೋರ್ಟ್ ಎದುರು ವಿಚಾರಣೆಯಲ್ಲಿ ಇದೇ ವಿಷಯ ಕುರಿತ ಅರ್ಜಿಗಳನ್ನು ವಾಪಸು ಪಡೆಯಲು ಬಯಸಿದರೆ ಪಡೆಯಬಹುದು ಎಂದು ತಿಳಿಸಿತು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೃಷ್ಣಮುರಾರಿ ಪೀಠದ ಇತರೆ ಸದಸ್ಯರು. ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಈ ಹಂತದಲ್ಲಿ ಅರ್ಜಿ ವಾಪಸು ಪಡೆಯಬಹುದು. ಎರಡು ತಿಂಗಳ ನಂತರ ಬೇಕಿದ್ದರೆ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಬಹುದು ಎಂದು ಪೀಠ ತಿಳಿಸಿತು.
ಕ್ರಿಮಿನಲ್ ನಿಂದನೆ ಪ್ರಕರಣಗಳಲ್ಲಿ ಇರುವ ಕಾನೂನು ಅವಕಾಶಗಳ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇದು, ಸಂವಿಧಾನದ ಅಭಿವ್ಯಕ್ತಿ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.