ನವದೆಹಲಿ: ‘ಕೋವಿಡ್–19‘ ಚಿಕಿತ್ಸೆಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಲಭ್ಯತೆ ಕುರಿತ ಮಾಹಿತಿ ನೀಡುವ ‘ಕೇಂದ್ರೀಕೃತ ಪೋರ್ಟಲ್‘ ನಿರ್ವಹಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ‘ ಕೇಂದ್ರೀಕೃತ ಪೋರ್ಟಲ್ನ ಅಗತ್ಯವೂ ಸೇರಿದಂತೆ, ನಿಮ್ಮಲ್ಲಿರುವ ಈ ಸಲಹೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ತಿಳಿಸುವಂತೆ ನಿರ್ದೇಶನ ನೀಡಿದೆ.
‘ಕೇಂದ್ರೀಕೃತ ಪೋರ್ಟಲ್ ಸೇರಿದಂತೆ ಅರ್ಜಿದಾರರ ಬಳಿ ಕೆಲವು ಸಲಹೆಗಳಿದ್ದು, ಅವುಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ತಿಳಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡುವುದು ಸೂಕ್ತವಾಗಿದೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
‘ಅರ್ಜಿದಾರರ ಸಲಹೆಗಳನ್ನು ಸೂಕ್ತವಾದ ಹಂತದಲ್ಲಿ ಪರಿಶೀಲಿಸಬಹುದು. ಮೇಲ್ಕಂಡ ಸ್ವಾತಂತ್ರ್ಯದೊಂದಿಗೆ ಈ ಅರ್ಜಿಯನ್ನು ಹಿಂಪಡೆಯಲು ಅನುವು ಮಾಡಿಕೊಡಲಾಗಿದೆ‘ ಎಂದು ಸೋಮವಾರ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಅಗತ್ಯವಸ್ತುಗಳಾದ ಆಮ್ಲಜನಕ ಸಿಲಿಂಡರ್ಗಳು, ಆಮ್ಲಜನಕ ಸಾಂದ್ರಕಗಳು ಮತ್ತು ಔಷಧಿಗಳ ಲಭ್ಯತೆಯ ಮಾಹಿತಿ ನಿರ್ವಹಣೆಗೆ ಕೇಂದ್ರೀಕೃತ ಪೋರ್ಟಲ್ ಸ್ಥಾಪಿಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು. ದೇಹಲಿಯ ಎಸ್ಎಫ್ಎಸ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿತ್ತು.