ನವದೆಹಲಿ: ಖಾಸಗಿ ಪತ್ತೇದಾರರ ನಿಯಂತ್ರಣಕ್ಕೆ ಮಾನದಂಡಗಳನ್ನು ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭಾರತೀಯ ನಾಗರಿಕರ ವಿವರಗಳನ್ನು ವಿದೇಶಗಳಿಗೆ ನಿಯಮಬಾಹಿರವಾಗಿ ಒದಗಿಸುವುದನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಈ ಅರ್ಜಿಯನ್ನು ಹಿಂದೆ ಪಡೆಯಿರಿ ಅಥವಾ ನಾವು ವಜಾ ಮಾಡುತ್ತೇವೆ ಎಂದು ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಅವರು, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಭಾದತ್ತಾ ಮುಖಿಜಾ ಅವರಿಗೆ ಸೂಚಿಸಿದರು.
ಹರಿಯಾಣ ಮೂಲದ ಮಹಿಳೆ ಅರ್ಜಿ ಸಲ್ಲಿಸಿದ್ದು, ದೆಹಲಿ ಮೂಲದ ಕಂಪನಿಯಲ್ಲಿ ನಿರ್ದೇಶಕರಾಗಿರುವ ಇಬ್ಬರು ಖಾಸಗಿ ಪತ್ತೇದಾರರು ಯಾವುದೇ ಪ್ರಾಧಿಕಾರದ ಅನುಮೋದನೆಯಿಲ್ಲದೆ ತಮ್ಮ ಖಾಸಗಿ ವಿವರಗಳನ್ನು ದಾಖಲಿಸುತ್ತಿದ್ದಾರೆ. ಹಾಗೂ ಇವುಗಳನ್ನು ಅಮೆರಿಕ ಮೂಲದ ವ್ಯಕ್ತಿಗೆ ಕಳುಹಿಸುತ್ತಿದ್ದಾರೆ ಎಂದು ದೂರಿದ್ದರು.