ನವದೆಹಲಿ: ಬಿಹಾರದಲ್ಲಿ ಜಾತಿ ಗಣತಿ ನಡೆಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ವಿಕ್ರಂನಾಥ್ ಅವರಿದ್ದ ಪೀಠವು, ‘ಈ ಅರ್ಜಿಗಳು ವಿಚಾರಣೆಗೆ ಅರ್ಹವಲ್ಲ. ಅರ್ಜಿದಾರರು ಸಂಬಂಧಿಸಿದ ಹೈಕೋರ್ಟ್ ಮೊರೆ ಹೋಗಬಹುದು’ ಎಂದು ಹೇಳಿತು.
‘ಇದು, ಪ್ರಚಾರದ ಆಸಕ್ತಿವುಳ್ಳ ಅರ್ಜಿಯಾಗಿದೆ. ಇಂತಹ ಜಾತಿಗೆ, ಇಷ್ಟು ಪ್ರಮಾಣದ ಮೀಸಲು ನಿಗದಿಪಡಿಸಿ ಎಂದು ನಾವು ಹೇಗೆ ಹೇಳಲು ಸಾಧ್ಯ. ಹೀಗೆ ನಿರ್ದೇಶನ ನೀಡಲು ಹಾಗೂ ಇಂತಹ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಆಗದು’ ಎಂದು ಸ್ಪಷ್ಟಪಡಿಸಿತು.
ಸರ್ಕಾರೇತರ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯು ಒಳಗೊಂಡಂತೆ ಮೂರು ಪ್ರತ್ಯೇಕ ಅರ್ಜಿಗಳು ಈ ಸಂಬಂಧ ಸಲ್ಲಿಕೆಯಾಗಿದ್ದವು.