ಶ್ರೀನಗರ: ಕಾಶ್ಮೀರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಹಿಮಪಾತವಾಗಿದೆ. ಇದರಿಂದಾಗಿ ವಾಹನಗಳ ಸಂಚಾರ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಮುಂಜಾಗ್ರತಾ ಕ್ರಮವಾಗಿ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿ ಸ್ಥಳಗಳಾದ ಪಹಲ್ಗಾಮ್ ಮತ್ತು ಗುಲ್ಮಾರ್ಗ್, ಅನಂತನಾಗ್, ಕುಲ್ಗಾಮ್, ಶೋಪಿಯಾನ್, ಪುಲ್ವಾಮಾ, ಬುದ್ಗಾಮ್ ಮತ್ತು ಕುಪ್ವಾರ, ಗಂದರ್ಬಾಲ್ ಮತ್ತು ಶ್ರೀನಗರದ ಗುಡ್ಡ ಪ್ರದೇಶಗಳು ಹಿಮದಿಂದ ಆವೃತವಾಗಿವೆ.
ಕಾಶ್ಮೀರದಲ್ಲಿ ತಾಪಮಾನವು ಸುಧಾರಣೆಯಾಗಿದೆ. ಆದರೂ ಕಣಿವೆಯಾದ್ಯಂತ ಘನೀಕರಿಸುವ ಬಿಂದುವಿನಿಗಿಂತ ಕಡಿಮೆ ತಾಪಮಾನವಿದ್ದು, ಶ್ರೀನಗರದಲ್ಲಿ ಗುರುವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 0.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣ ಕಾಶ್ಮೀರದ ಕೋಕರ್ನಾಗ್ನಲ್ಲಿ ಕನಿಷ್ಠ ಮೈನಸ್ 1.4 ಡಿಗ್ರಿ ಸೆಲ್ಸಿಯಸ್, ಕುಪ್ವಾರದಲ್ಲಿ ಮೈನಸ್ 1.5 ಪಹಲ್ಗಾಮ್ನಲ್ಲಿ ಮೈನಸ್ 2.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನಲ್ಲಿ ಕನಿಷ್ಠ ತಾಪಮಾನ ಮೈನಸ್ 7.6 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಜನವರಿ 19ರಿಂದ 25ರವರೆಗೆ ಹವಾಮಾನ ವೈಪರೀತ್ಯ ಕಂಡು ಬರಲಿದ್ದು, ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.