ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ(ಎಲ್ಒಸಿ) ಇರುವ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿ ಹಾಗೂ ಶೆಲ್ಲಿಂಗ್ನಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಸುಬೇದಾರ್ ರವೀಂದರ್ ಹುತಾತ್ಮ ಯೋಧ. ‘ಮಧ್ಯಾಹ್ನ 3.30ರ ವೇಳೆಗೆ ಹಾಗೂ ಸಂಜೆ 5.30ರ ವೇಳೆಗೆ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಈ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಗುಂಡಿನ ದಾಳಿಯಲ್ಲಿ ರವೀಂದರ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರದಲ್ಲಿ ಅವರು ಮೃತಪಟ್ಟರು. ಅವರೊಬ್ಬ ನಿಷ್ಠಾವಂತ, ಧೈರ್ಯಶಾಲಿ ಯೋಧರಾಗಿದ್ದರು. ಅವರ ಈ ತ್ಯಾಗಕ್ಕೆ ಇಡೀ ರಾಷ್ಟ್ರವೇ ಋಣಿಯಾಗಿರಲಿದೆ’ ಎಂದು ಸೇನಾ ವಕ್ತಾರರೊಬ್ಬರು ಹೇಳಿದರು.
ಎಲ್ಒಸಿಯಲ್ಲಿ 2020ರಲ್ಲಿ ಪಾಕಿಸ್ತಾನವು 5,100 ಬಾರಿ ಕದನವಿರಾಮ ಉಲ್ಲಂಘಿಸಿದ್ದು, ಇದು ಕಳೆದ 18 ವರ್ಷದಲ್ಲೇ ಅತ್ಯಧಿಕವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಈ ದುಷ್ಕೃತ್ಯಕ್ಕೆ 24 ಭದ್ರತಾ ಪಡೆ ಸಿಬ್ಬಂದಿ ಸೇರಿ 36 ಜನರು ಮೃತಪಟ್ಟಿದ್ದು, 130ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.