ಲಖನೌ: ಕೊರೊನಾ ಸೋಂಕಿನಿಂದಾಗಿ ಮಾಜಿ ಸಚಿವ ಹಾಜಿ ರಿಯಾಜ್ ಅಹ್ಮದ್ ಮತ್ತು ಹಿರಿಯ ಐಎಎಸ್ ಅಧಿಕಾರಿ ದೀಪಕ್ ತ್ರಿವೇದಿ ಅವರು ಗುರುವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷದ ನಾಯಕ ಹಾಜಿ ಜಿಯಾಜ್ ಅಹ್ಮದ್(69) ಬರೇಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಅಳಿಯ ಆರೀಫ್ ತಿಳಿಸಿದ್ದಾರೆ.
ಪಿಲಿಭಿಟ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಹ್ಮದ್, ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಅಹ್ಮದ್ ಅವರ ನಿಧನಕ್ಕೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸಂತಾಪ ಸೂಚಿಸಿದ್ದಾರೆ.
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಮತ್ತು ಕಂದಾಯ ಮಂಡಳಿ ಅಧ್ಯಕ್ಷ ದೀಪಕ್ ತ್ರಿವೇದಿ(59) ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯಲ್ಲಿ(ಎಸ್ಜಿಪಿಜಿಐ) ಗುರುವಾರ ನಿಧನರಾಗಿದ್ದಾರೆ.
ಉತ್ತರ ಪ್ರದೇಶ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿದ್ದ ತ್ರಿವೇದಿ ಅವರು, ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಇಬ್ಬರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.