ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆ ನಾಲ್ಕು ದಿನಗಳ ಬಿಡುವಿನ ಬಳಿಕ ಗುರುವಾರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಾಲ್ನಿಂದ ಪುನಾರಂಭವಾಯಿತು.
ಬೆಳಿಗ್ಗೆ 6.30ರಿಂದ ಯಾತ್ರೆಯನ್ನು ಆರಂಭಿಸಲಾಯಿತು. ರಾಜ್ಯದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ ಕುಮಾರ್ ರೆಡ್ಡಿ, ಸಿಎಲ್ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಯಾತ್ರೆಯು ಅ.23ರಂದು ಕರ್ನಾಟಕ ಮೂಲಕವಾಗಿ ರಾಜ್ಯಕ್ಕೆ ಪ್ರವೇಶಿಸಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಅ.23ರಿಂದ 26ರವರೆಗೆ ಬಿಡುವು ನೀಡಲಾಗಿತ್ತು.ಈ ವೇಳೆ ನವದೆಹಲಿಗೆ ತೆರಳಿದ್ದ ರಾಹುಲ್ ಗಾಂಧಿ ಬುಧವಾರ ರಾತ್ರಿ ತೆಲಂಗಾಣಕ್ಕೆ ಮರಳಿದರು.
ರಾಜ್ಯದಲ್ಲಿ 16 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, 19 ವಿಧಾನಸಭಾ ಕ್ಷೇತ್ರ ಮತ್ತು ಏಳು ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಸಂಚರಿಸಲಿದ್ದಾರೆ. ನವೆಂಬರ್ 7ರಂದು ಯಾತ್ರೆಯು ಮಹಾರಾಷ್ಟ್ರವನ್ನು ತಲುಪಲಿದೆ.