ನವದೆಹಲಿ: ಕೋವಿಡ್ನಿಂದ ಮೃತರಾದವರ ಕುಟುಂಬಕ್ಕೆ ₹ 50 ಸಾವಿರ ಪರಿಹಾರ ಕುರಿತು ರಾಜ್ಯಗಳು ಒದಗಿಸಿರುವ ದಾಖಲೆಗಳನ್ನು ಮಾದರಿ ಪರಿಶೀಲನೆಗೆ ಒಳಪಡಿಸಲು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಕೇಳಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಪರಿಹಾರವನ್ನು ಕೋರಿ ದಾವೆ ಮಂಡಿಸಲು ಗರಿಷ್ಠ ನಾಲ್ಕು ವಾರದ ಸಮಯ ಮಿತಿ ನಿಗದಿಪಡಿಸಬೇಕು ಎಂದೂ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಕೋರಿದೆ.
ನಿಯಮಬಾಹಿರವಾಗಿ ಪರಿಹಾರವನ್ನು ಪಡೆಯಲು ಸ್ಥಳೀಯ ಅಧಿಕಾರಿಗಳ ನೆರವಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದ್ದು, ಈ ಸಂಬಂಧ ಅಕ್ರಮ ಜಾಲವು ಸಕ್ರಿಯವಾಗಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಮತ್ತು ಕೆಲ ರಾಜ್ಯಗಳ ಸರ್ಕಾರಗಳಿಗೆ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ನಕಲಿ ದಾಖಲೆಗಳನ್ನು ಒಳಗೊಂಡಿವೆ ವರದಿಗಳಿವೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಈ ಹಿಂದೆ ಅಕ್ರಮ ಜಾಲ ಕಾರ್ಯತತ್ಪರವಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಂದ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು.
ಕೋವಿಡ್–19ನಿಂದಾಗಿ ದೇಶದಲ್ಲಿ ಇದುವರೆಗೂ ಸುಮಾರು 5.16 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.