ನೋಯ್ಡಾ(ಉತ್ತರಪ್ರದೇಶ): ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಸಂತ್ರಸ್ತೆಯ ಕುಟುಂಬದವರೊಂದಿಗೆ ಹತ್ರಾಸ್ಗೆ ತೆರಳುತ್ತಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮತ್ತು ಆ ಸಂಘಟನೆಯ ದೆಹಲಿ ಘಟಕದ ಮುಖಸ್ಥ ಹಿಮಾಂಶು ಬಲ್ಮಿಕಿ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮುಖಂಡರ ಸಹಚರರು ಆರೋಪಿಸಿದ್ದಾರೆ.
ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಭೀಮ್ ಆರ್ಮಿ ಮುಖ್ಯಸ್ಥ ಆರಂಭಿಸಿರುವ ಆಜಾದ್ ಸಮಾಜ್ ಪಾರ್ಟಿಯ ಕಾರ್ಯಕರ್ತರ ಪ್ರಕಾರ, ಮಂಗಳವಾರ ರಾತ್ರಿ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗೆ ಹತ್ರಾಸ್ಗೆ ತೆರಳುತ್ತಿದ್ದ ಅಜಾದ್ ಮತ್ತು ಬಲ್ಮಿಕಿ,ಅಂದು ರಾತ್ರಿ 10 ಗಂಟೆಯ ನಂತರ ನಾಪತ್ತೆಯಾಗಿದ್ದಾರೆ.
‘ಅಲಿಗಢದ ತಪ್ಪಲ್ಗೆ ತೆರಳಲು ಜುದಾರ್ ಟೋಲ್ ಪ್ಲಾಜಾ ತಲುಪಿದ ನಂತರ ಆಜಾದ್ ಮತ್ತು ಬಲ್ಮಿಕಿ ಇರುವ ಸ್ಥಳದ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ‘ ಎಂದು ಆಜಾದ್ ಸಮಾಜ್ ಪಾರ್ಟಿಯ ಪ್ರಮುಖರ ಸಮಿತಿ ಸದಸ್ಯ ರವೀಂದ್ರ ಭಾತಿ ಹೇಳಿದ್ದಾರೆ. ‘ಮಂಗಳವಾರ ರಾತ್ರಿ ಅಥವಾ ಬುಧವಾರ ಮುಂಜಾನೆ ಇವರಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಆ ವಿಷಯವನ್ನು ಸಾರ್ವಜನಿಕಗೊಳಿಸುತ್ತಿಲ್ಲ‘ ಎಂದು ಭಾತಿ ಆರೋಪಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮಂಗಳವಾರ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಎದುರು ಆಜಾದ್ ಸಮಾಜವಾದಿ ಪಾರ್ಟಿ, ಭೀಮ್ ಆರ್ಮಿ ಮತ್ತು ದಲಿತ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿಈ ಇಬ್ಬರು ಮುಖಂಡರು ಪಾಲ್ಗೊಂಡಿದ್ದರು.