ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಸಂಪನ್ಮೂಲಗಳ ಅಕ್ರಮ ಬಳಕೆ: ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಟೀಕೆ

Last Updated 29 ಜನವರಿ 2022, 11:24 IST
ಅಕ್ಷರ ಗಾತ್ರ

ಲಖನೌ: ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಂಪನ್ಮೂಲಗಳನ್ನು ಬಿಜೆಪಿಯು ಅಕ್ರಮವಾಗಿ ಬಳಸುತ್ತಿದೆ ಎಂದು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದ್ದಾರೆ.

‘ಎನ್‌ಡಿಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ ಬಿಜೆಪಿ ಸರ್ಕಾರದಿಂದ ಸಂಪನ್ಮೂಲಗಳ ದುರುಪಯೋಗವಾಗುತ್ತಿದೆ. ಸಾರ್ವಜನಿಕ ಸಭೆಗಳಿಗೆ ಶಿಕ್ಷಕರನ್ನು ಬಸ್ಸುಗಳಲ್ಲಿ ಕರೆತರಲಾಗುತ್ತಿದೆ. ಈ ಬಾರಿ ಅಂಚೆ ಮತಪತ್ರದ ದುರ್ಬಳಕೆಯಾಗಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದ್ದಾರೆ.

‘ಬಿಜೆಪಿಯವರು ಬದಲಾಗುವುದಿಲ್ಲ. ಅವರ ಸಂಪೂರ್ಣ ಪ್ರಚಾರವು ಮಂದಿರ-ಮಸೀದಿಗಳ ಮೇಲೆ ನಿಂತಿದೆ. ರಾಮಮಂದಿರ ನಿರ್ಮಾಣ, ಜಿನ್ನಾ ಇತ್ಯಾದಿಗಳನ್ನು ಆಧರಿಸಿದೆ. ಶೇ 20 ರಷ್ಟು ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬುದಾಗಿ ಬಿಜೆಪಿ ತಿಳಿಸಿದೆ. ಈ ಶೇ 20ರಷ್ಟು ಜನರು ಯಾರು?’ ಎಂದು ಚೌಧರಿ ಪ್ರಶ್ನಿಸಿದ್ದಾರೆ.‌

‘ಬಿಜೆಪಿಯವರ ಪ್ರಕಾರ, ಶೇ 20 ರಷ್ಟು ಜನರು ಪಾಕಿಸ್ತಾನಕ್ಕೆ ಬೆಂಬಲಿಸುತ್ತಿದ್ದಾರೆ. ಭಾರತವು ಉತ್ತಮ ಸ್ಥಿತಿಯಲ್ಲಿ ಇರದಿರುವುದನ್ನು ನೋಡಿ ಸಂತೋಷ ಪಡುತ್ತಾರೆ.ಬಿಜೆಪಿಗೆ ಏನಾದರೂ ಕೆಟ್ಟದ್ದು ಸಂಭವಿಸಿದಾಗ ಪಟಾಕಿ ಸಿಡಿಸುತ್ತಾರೆ. ಆದರೆ, ಇವೆಲ್ಲಬಿಜೆಪಿ ಸೃಷ್ಟಿಸುತ್ತಿರುವ ಕೃತಕ ಅಭಿಪ್ರಾಯಗಳಾಗಿವೆ’ ಎಂದು ಚೌಧರಿ ಟೀಕಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷದೊಂದಿಗೆ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳವು ಪಶ್ಚಿಮ ಯುಪಿಯಲ್ಲಿ ಪ್ರಾಬಲ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT