ತಿರುವನಂತಪುರ: ರಾಜ್ಯ ಸರ್ಕಾರ ನೀಡುವ ಉಚಿತ ಲಸಿಕೆಯನ್ನು ತೆಗೆದುಕೊಳ್ಳುವವರು ಲಸಿಕೆಯ ದರದ ಮೊತ್ತವನ್ನು ಕೇರಳ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.
‘#VaccineChallenge’ ಎಂಬ ಹ್ಯಾಷ್ಟ್ಯಾಗ್ಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಯಾನ ಆರಂಭಗೊಂಡ 24 ಗಂಟೆಗಳಲ್ಲಿ ಮುಖ್ಯಮಂತ್ರಿಗಳ ನಿಧಿಗೆ ₹ 22 ಲಕ್ಷ ದೇಣಿಗೆ ಪಾವತಿಯಾಗಿದೆ.
ಕೇಂದ್ರ ಘೋಷಿಸಿರುವ ಹೊಸ ಲಸಿಕೆ ನೀತಿಯನ್ನು ಪ್ರತಿಭಟಿಸಿ ಹಾಗೂ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬೆಂಬಲ ಸೂಚಿಸಿ ಬುಧವಾರ ಈ ಅಭಿಯಾನವನ್ನು ಆರಂಭಿಸಲಾಗಿದೆ.