ಕೋಲ್ಕತ್ತ: ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಮಗಳು ಸೋಹಿನಿ ಭಟ್ಟಾಚಾರ್ಯ ಹಾಗೂ ಅಳಿಯ ಕಲ್ಯಾಣ್ಮಯ್ ಭಟ್ಟಾಚಾರ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ನಿಗಾ ಇರಿಸಿದೆ.
ಸೋಹಿನಿ ಹಾಗೂ ಕಲ್ಯಾಣ್ಮಯ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೋಹಿನಿ ದಂಪತಿಗೆ ಇ–ಮೇಲ್ ಸಂದೇಶ ಕಳುಹಿಸಿದ್ದು, ಆದಷ್ಟು ಬೇಗನೆ ವಿಚಾರಣೆಗಾಗಿ ಕೋಲ್ಕತ್ತಕ್ಕೆ ಬರುವಂತೆ ಸೂಚಿಸಿದೆ.
ಆದಾಗ್ಯೂ, ಇಬ್ಬರನ್ನು ಕರೆಸಿಕೊಳ್ಳುವುದಕ್ಕೆ ಕಾರಣಗಳು ಬೇರೆ ಇವೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ತಿಳಿಸಿವೆ.
ಕಲ್ಯಾಣ್ಮಯ್ ಅವರು ಇಂಪ್ರೋಲೈನ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್, ಎಚ್ಆರ್ಐ ವೆಲ್ತ್ ಕ್ರಿಯೇಷನ್ ರೆಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್, ಅಕ್ರಿಷಿಯಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಜತೆ ಹೊಂದಿರುವ ಸಹಭಾಗಿತ್ವಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ.
ಕೇಂದ್ರ ವಾಣಿಜ್ಯ ಇಲಾಖೆಯ ಕಂಪನಿಗಳ ನೋಂದಣಿ ದಾಖಲೆ ಪ್ರಕಾರ ಕಲ್ಯಾಣ್ಮಯ್ ಅವರು ಅಕ್ರಿಷಿಯಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ನ ಎಂಡಿ ಆಗಿದ್ದಾರೆ. ಇತರ ಎರಡು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಉಳಿದೆರಡು ಕಂಪನಿಗಳ ಇನ್ನೊಬ್ಬ ನಿರ್ದೇಶಕರು ಕೃಷ್ಣ ಚಂದ್ರ ಅಧಿಕಾರಿ ಎಂಬುವವರಾಗಿದ್ದು, ಇವರು ಕಲ್ಯಾಣ್ಮಯ್ ಅವರ ಸಹೋದರ ಮಾವ ಎನ್ನಲಾಗಿದೆ. ಇವರು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಪಿಂಗ್ಲಾ ನಿವಾಸಿಯಾಗಿದ್ದಾರೆ.
ಅಮೆರಿಕದಲ್ಲಿದ್ದುಕೊಂಡು ಕಲ್ಯಾಣ್ಮಯ್ ಅವರು ಭಾರತದ ಕಂಪನಿಗಳನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ.
ಈ ಕಂಪನಿಗಳು ಹಣ ವರ್ಗಾವಣೆ ಉದ್ದೇಶವನ್ನು ಹೊಂದಿವೆ ಎಂದೂ ಮೂಲಗಳು ಹೇಳಿವೆ.
ಮತ್ತೊಂದೆಡೆ, ದಕ್ಷಿಣ 24 ಪರಗಣ ಜಿಲ್ಲೆಯ ಪುರಿ ಗ್ರಾಮದಲ್ಲಿ ಹೊಂದಿರುವ ಫಾರ್ಮ್ಹೌಸ್ಗೆ ಸಂಬಂಧಿಸಿ ಸೋಹಿನಿ ಅವರಿಗೆ ಸಮನ್ಸ್ ನೀಡಲಾಗಿದೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಇತ್ತೀಚೆಗೆ ಬಂಧಿಸಿತ್ತು. ಇದಾದ ಕೆಲವು ದಿನಗಳ ಬಳಿಕ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಲಾಗಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷದಿಂದಲೂ (ಟಿಎಂಸಿ) ಉಚ್ಚಾಟನೆ ಮಾಡಲಾಗಿತ್ತು. ಏತನ್ಮಧ್ಯೆ, ಪಾರ್ಥ ಚಟರ್ಜಿ ತನಿಖೆಗೆ ಸಹರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ್ದು, ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.