ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ: ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಲಾಠಿ ಪ್ರಹಾರ

Last Updated 16 ಮಾರ್ಚ್ 2021, 19:04 IST
ಅಕ್ಷರ ಗಾತ್ರ

ಕೋಲ್ಕತ್ತ: ಟಿಎಂಸಿಯಿಂದ ವಲಸೆ ಬಂದವರಿಗೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಕಚೇರಿ ಎದುರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂಸಾಚಾರ ನಡೆದಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

‘ರಾಜ್ಯದಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ವಲಸಿಗರಿಗೆ ಮಣೆ ಹಾಕಲಾಗಿದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಮೂಲ ಬಿಜೆಪಿಗರಿಗೇ ಟಿಕೆಟ್ ನೀಡಬೇಕು’ ಎಂದು ಆಗ್ರಹಿಸಿ, ಪಕ್ಷದ ನೂರಾರು ಕಾರ್ಯಕರ್ತರು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆಗ ಪಕ್ಷದ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ ನಡೆದಿದೆ. ಕಲ್ಲುತೂರಾಟವೂ ನಡೆದಿದೆ. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘ಇದು ನಮ್ಮ ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಮತ್ತು ಹಿಂಸಾಚಾರವಲ್ಲ. ಇದರ ಹಿಂದೆ ಯಾವುದೋ ಸಂಚು ಇದೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಹೇಳಿದೆ.

ಬಿಜೆಪಿ ಬೆಂಬಲಿಗರಿಂದ ದಾಳಿ

ಕೋಲ್ಕತ್ತದ ಕಾಲೇಜ್ ಸ್ಟ್ರೀಟ್‌ನಲ್ಲಿ ಬಿಜೆಪಿಗೆ ಮತ ನೀಡಬೇಡಿ ಎಂದು ಮೆರವಣಿಗೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಸದಸ್ಯರ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ಇಲ್ಲಿನ ಕಾಲೇಜ್‌ ಸ್ಟ್ರೀಟ್‌ನಲ್ಲಿರುವ ಐತಿಹಾಸಿಕ ಕಾಫಿ ಹೌಸ್‌ನಲ್ಲಿ, ‘ನೋ ವೋಟ್ ಫಾರ್ ಬಿಜೆಪಿ’ ಎಂಬ ಬರಹ ಇರುವ ಪೋಸ್ಟರ್ ಅಂಟಿಸಿದ್ದರು. ಅವರೆಲ್ಲಾ ಅಲ್ಲೇ ಇರುವಾಗಲೇ ಬಿಜೆಪಿಯ ಹಲವು ಬೆಂಬಲಿಗರು ಕಾಫಿ ಹೌಸ್‌ಗೆ ನುಗ್ಗಿದರು. ಪೋಸ್ಟರ್‌ ಹರಿದುಹಾಕಿದರು. ಇದನ್ನು ತಡೆಯಲು ಬಂದವರ ಮೇಲೆ ಹಲ್ಲೆ ನಡೆಸಿದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ವಕ್ತಾರ ತೇಜಿಂದರ್ ಸಿಂಗ್ ಬಗ್ಗಾ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ. ದಾಳಿಯ ವಿಡಿಯೊಗಳನ್ನು ಬಗ್ಗಾ ಅವರು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT