ನವದೆಹಲಿ: ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ಗೋಧಿ ದಾಸ್ತಾನು ಪ್ರಕ್ರಿಯೆಯನ್ನು ಇದೇ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಭಾನುವಾರ ತಿಳಿಸಿದೆ.
ಪೂರ್ವನಿಗದಿಯಂತೆ ರಾಜಸ್ಥಾನದಲ್ಲಿ ಮೇ 10, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮೇ 15ಕ್ಕೆ ಗೋಧಿ ದಾಸ್ತಾನು ಪ್ರಕ್ರಿಯೆ ಕೊನೆಗೊಳ್ಳಬೇಕಿತ್ತು.
ಕೇಂದ್ರ ಸರ್ಕಾರದ ಗೋಧಿ ದಾಸ್ತಾನು ಮುಂದುವರಿಸುವಂತೆ ‘ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ)’ಕ್ಕೂ ಸೂಚಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ದಾಸ್ತಾನು ಅವಧಿ ವಿಸ್ತರಣೆಯಿಂದ ರೈತರಿಗೆ ಪ್ರಯೋಜನವಾಗಲಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಮನವಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
ಈ ಮಧ್ಯೆ, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಬಿಹಾರ ಮತ್ತು ರಾಜಸ್ಥಾನಗಳಿಂದ ಕೇಂದ್ರದ ದಾಸ್ತಾನು ಪ್ರಕ್ರಿಯೆ ಮುಂದುವರಿದಿದೆ.
ದೇಶದಲ್ಲಿ ದರ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಶುಕ್ರವಾರವಷ್ಟೇ ಕೇಂದ್ರ ಸರ್ಕಾರವು ಗೋಧಿ ರಫ್ತನ್ನು ನಿಷೇಧಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷವು, ಸರಿಯಾಗಿ ಖರೀದಿ ಹಾಗೂ ದಾಸ್ತಾನು ಮಾಡಿದ್ದರೆ ರಫ್ತು ನಿಷೇಧಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಹೇಳಿತ್ತು.