ನವದೆಹಲಿ: ‘ಹಾಥರಸ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಸಂಚು ಇದೆ ಎಂದುಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಊಹಿಸಬಹುದು. ಆದರೆ, ನನಗೆ ಬಾಲಕಿಗೆ ಎರಗಿದ ದುರಂತವಷ್ಟೇ ಕಾಣಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
‘ಸಿ.ಎಂ ಏನು ಬೇಕಾದರೂ ಕಲ್ಪಿಸಿಕೊಳ್ಳಲಿ. ಒಬ್ಬ ಯುವತಿಗೆಕಿರುಕುಳ ನೀಡಲಾಯಿತು, ಆಕೆಯ ಕತ್ತು ಮುರಿಯಲಾಯಿತು. ಕೃತ್ಯ ಎಸಗಿದವರೇ ಆಕೆಯ ಕುಟುಂಬಕ್ಕೆ ಬೆದರಿಕೆ ಒಡ್ಡಿದರು. ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂಬುದಷ್ಟೇ ನನಗೆ ಕಾಣಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
‘ಇದೊಂದು ದುರಂತ. ಬಾಲಕಿಯ ಕುಟುಂಬಕ್ಕೆ ರಕ್ಷಣೆ ನೀಡುತ್ತೇನೆ ಎಂದು ಹೇಳುವ ಸಭ್ಯತೆಯನ್ನಾದರೂ ಮುಖ್ಯಮಂತ್ರಿ ತೋರಿಸಬೇಕಾಗಿತ್ತು’ ಎಂದು ರಾಹುಲ್ ಹೇಳಿದರು.ಹಾಥರಸ್ ದುರಂತ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರುವುದು ಖಂಡನೀಯ’ ಎಂದು ಅವರು ಟೀಕಿಸಿದರು.