‘ಆಯೋಗಕ್ಕೆ ರವಿವರ್ಮಕುಮಾರ್ ಅವರು ಅಧ್ಯಕ್ಷರಾಗಿದ್ದಾಗ ಲಿಂಗಾಯತ ಸಮುದಾಯವು ಇದೇ ವಿಷಯದ ಸಂಬಂಧ ಸಲ್ಲಿಸಿದ್ದ ಮನವಿ ತಿರಸ್ಕಾರಗೊಂಡಿದೆ. ಈಗ ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡಿಕೆ ಇಟ್ಟಿದೆ. ಈ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಯಾವುದೇ ಅಂಕಿ–ಅಂಶಗಳು ಮತ್ತು ದತ್ತಾಂಶಗಳನ್ನು ಈ ಹಿಂದಿನ ಆಯೋಗಗಳು ನೀಡಿಲ್ಲ. ಆಯೋಗದ ವರದಿಗಳಲ್ಲೂ ಇದು ಉಲ್ಲೇಖವಾಗಿಲ್ಲ. ಸಂವಿಧಾನ ಜಾರಿಗೆ ಬಂದ ಬಳಿಕ ನೇಮಕ ಆಗಿರುವ ಯಾವ ಆಯೋಗಗಳೂ (ನಾಗನಗೌಡ ಸಮಿತಿ, ಹಾವನೂರ್ ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ) ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ವಾದ ಮಂಡಿಸಿದರು.