ಬೆಂಗಳೂರು: ಕೋವಿಡ್ ನಿರ್ವಹಣೆ, ನಿಯಂತ್ರಣದ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ ಮಾತ್ರ ಆದೇಶ, ಸುತ್ತೋಲೆಗಳನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದ್ದಾರೆ.
ಸೋಮವಾರ ಈ ಸಂಬಂಧ ಆದೇಶ ಹೊರಡಿಸಿರುವ ಅವರು, 'ಮುಖ್ಯ ಕಾರ್ಯದರ್ಶಿ ಹೊರತಾಗಿ ಯಾವುದೇ ಸಚಿವರು ಅಥವಾ ಇಲಾಖೆಯ ಅಧಿಕಾರಿಗಳು ಆದೇಶ, ಸುತ್ತೋಲೆ ಹೊರಡಿಸುವಂತಿಲ್ಲ.
ಮುಖ್ಯ ಕಾರ್ಯದರ್ಶಿಯವರು ನನ್ನ ಅನುಮೋದನೆ ಪಡೆದ ಬಳಿಕವೇ ಆದೇಶ ಅಥವಾ ಸುತ್ತೋಲೆಗಳನ್ನು ಹೊರಡಿಸಬೇಕು' ಎಂದು ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ, ನಿಯಂತ್ರಣ ಕ್ರಮಗಳ ವಿಚಾರದಲ್ಲಿ ಗೊಂದಲ ಉಂಟಾಗುತ್ತಿರುವ ಕಾರಣದಿಂದ ಮುಖ್ಯಮಂತ್ರಿ ಈ ಕ್ರಮ ಕೈಗೊಂಡಿದ್ದಾರೆ.