ಬೆಂಗಳೂರು: ‘ನಾಡಿನ ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಶಿವಾಜಿ ಮಹಾರಾಜರು ಹೋರಾಡಿದ ರೀತಿಯು ಎಂದಿಗೂ ಪ್ರೇರಕಶಕ್ತಿ ಆಗಿರುತ್ತದೆ’ ಎಂದು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಸದಾಶಿವನಗರದ ಭಾಷ್ಯಂ ವೃತ್ತದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ‘ಚಿಕ್ಕವಯಸ್ಸಿನಲ್ಲಿಯೇ ತಾಯಿ ಜೀಜಾಬಾಯಿ ಅವರಿಂದ ಸಂಸ್ಕಾರ, ದೇಶಭಕ್ತಿಗಳನ್ನು ಮೈಗೂಡಿಸಿಕೊಂಡಿದ್ದರು. ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಸಲ್ಲಿಸಿದ ಸೇವೆ ವಿಶೇಷವಾದುದು’ ಎಂದರು.
‘ಶಿವಾಜಿ ಜಯಂತಿಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ. ರಾಜ್ಯದಲ್ಲಿರುವ ಮರಾಠ ಜನರ ಹಿತರಕ್ಷಣೆಗಾಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಮಹಾರಾಷ್ಟ್ರದ ಹೊರತಾಗಿ ಇಂತಹ ಅಭಿವೃದ್ಧಿ ನಿಗಮ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ’ ಎಂದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಕರ್ನಾಟಕ ಮರಾಠ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮನೋಜ್, ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಗಾಯಕ್ ವಾಡ್, ಪಾಲಿಕೆ ಮಾಜಿ ಸದಸ್ಯರಾದ ಸುಮಂಗಲಾ ಕೇಶವ್, ಗಣೀಶ್, ನಟ ಕೇಸರ್ಕರ್ ಗಣೇಶ್ ಇದ್ದರು.