ಕಲಬುರಗಿ: ‘ದಮ್, ತಾಕತ್ತು ಇದ್ದರೆ ನಮ್ಮ ಮತ್ತು ನಿಮ್ಮ ಮೇಲಿನ ಆರೋಪವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.
ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದರು.
‘ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ. ಐದು ವರ್ಷ ನಾನು ಮುಖ್ಯಮಂತ್ರಿ ಆಗಿದ್ದೆ. ದೇವರಾಜ ಅರಸು ಹೊರತುಪಡಿಸಿದರೆ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಸಿಕ್ಕಿದ್ದು, ಹೆಮ್ಮೆಯ ವಿಷಯ’ ಎಂದು ಹೇಳಿದರು.
‘ನಮ್ಮ ಆಡಳಿತ ಅವಧಿಯ 2013ರ ಪ್ರಣಾಳಿಕೆಯಲ್ಲಿ ನೀಡಿದ 158 ಭರವಸೆ ಇಡೇರಿಸಿದ್ದೇವೆ. ಜೊತೆಗೆ 30 ಹೊಸ ಕಾಯ೯ಕ್ರಮ ನೀಡಿದ್ದೇವೆ. ನಾವು ಜನರಿಗೆ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ವಚನದಂತೆ ಕಾಂಗ್ರೆಸ್ ನಡೆಯುತ್ತದೆ. ಬಿಜೆಪಿ ಒಂದು ಹೇಳುತ್ತದೆ, ಇನ್ನೊಂದು ಮಾಡುತ್ತದೆ’ ಎಂದರು.