ಬೆಂಗಳೂರು: ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಸೇರಿ ಕೋವಿಡ್ ನಿಯಮಗಳ ಉಲ್ಲಂಘನೆ ಬಗ್ಗೆ ನಾಗರಿಕರಿಂದ ದೂರುಗಳನ್ನು ಸ್ವೀಕರಿಸಲು ಮೂರು ದಿನಗಳಲ್ಲಿ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಇ–ಮೇಲ್ ಮತ್ತು ವಾಟ್ಸ್ಆ್ಯಪ್ ಮೂಲಕವೂ ದೂರುಗಳನ್ನು ಸಲ್ಲಿಸಲು ಅವಕಾಶ ಆಗುವಂತೆ ಕಾರ್ಯವಿಧಾನ ರೂಪಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿತು.
‘ಅಹವಾಲು ಸ್ವೀಕರಿಸುವ ವ್ಯವಸ್ಥೆ ಇದ್ದರೆ ನಾಗರಿಕರ ದೂರುಗಳನ್ನು ರಾಜ್ಯ ಮಟ್ಟದ ಸಮಿತಿ ಮತ್ತು ಬೆಂಗಳೂರು ನಗರ ಸಮಿತಿ ಕೂಡಲೇ ಪರಿಶೀಲಿಸಬಹುದು. ದೂರು ನೀಡಲು ಕಾರ್ಯವಿಧಾನ ರೂಪಿಸಿ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಬಿಬಿಎಂಪಿ ಸೇರಿ ಸ್ಥಳೀಯ ಕಚೇರಿಗಳಲ್ಲಿ ಈ ಮಾಹಿತಿ ಪ್ರಕಟಿಸಬೇಕು’ ಎಂದು ಹೇಳಿತು.
ಕೋವಿಡ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಪೀಠಕ್ಕೆ ಸಲ್ಲಿಸಿತು.