ಹಾವೇರಿ: ‘ಹಲಾಲ್ ಮುಕ್ತ ದೀಪಾವಳಿಗೆ ಈಗಾಗಲೇ ರಾಜ್ಯದಲ್ಲಿ ಎಲ್ಲ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಅಭಿಯಾನ ಶುರು ಮಾಡಿದ್ದೇವೆ. ದುಷ್ಟರಿಗೆ, ಭಯೋತ್ಪಾದಕರಿಗೆ, ಮುಸ್ಲಿಂ ಗೂಂಡಾಗಳಿಗೆ ಹಣ ಹೋಗುವುದನ್ನು ತಡೆಯಲು ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕು’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಹಲಾಲ್ ಅನ್ನೋದು ಖುರಾನ್ನಲ್ಲಿ ಮಾಂಸದ ಆಹಾರದಲ್ಲಿ ಮಾತ್ರವಿತ್ತು. ಇವತ್ತು ಹಲಾಲ್ ಅನ್ನೋದು ಮಾಂಸದಲ್ಲಿ ಮಾತ್ರವಲ್ಲ, ಎಲ್ಲ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ. ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ‘ಅಲ್ ಜಮಾಯತ್ ಅಲ್ ಉಲೇಮಾ ಟ್ರಸ್ಟ್’ ಅನ್ನೋದಕ್ಕೆ ಜಮಾ ಆಗುತ್ತಿದೆ. ಮುಸ್ಲಿಮರ ಜೊತೆ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಮಾಡಬಾರದು’ ಎಂದು ತಿಳಿಸಿದರು.
‘ಹಿಂದೂಗಳ ಹಬ್ಬ ಹಿಂದೂಗಳ ಕಡೆಯಿಂದ ಖರೀದಿ ಮಾಡಿದರೆ ಮಾತ್ರ ಶಾಸ್ತ್ರಬದ್ಧವಾಗುತ್ತದೆ. ಮುಸ್ಲಿಮರ ಕಡೆಯಿಂದ ಖರೀದಿಯಾದರೆ ಅಶಾಸ್ತ್ರ ಆಗುತ್ತದೆ’ ಎಂದರು.
ನಟ ಚೇತನ್ ವಿರುದ್ಧ ವಾಗ್ದಾಳಿ
ಕಾಂತಾರ ಚಿತ್ರದ ಕುರಿತು ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಾಂತಾರ ಚಿತ್ರ ಇಡೀ ಕರ್ನಾಟಕ ಮಾತ್ರವಲ್ಲ, ದೇಶದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಅಂಥದ್ದರಲ್ಲಿ ಒಬ್ಬ ದುಷ್ಟ, ನೀಚ, ನಾಸ್ತಿಕವಾದಿ ನಟ ಚೇತನ್ ಕಲ್ಲು ಹಾಕುವ ಪ್ರಯತ್ನ ಮಾಡಿದ್ದು ಖಂಡನೀಯ, ಸಂಸ್ಕೃತಿ ವಿರೋಧಿ. ನಮ್ಮ ಹಿಂದೂ ಸಮಾಜ ಒಡೆಯುವ ಪ್ರಕ್ರಿಯೆ ಮಾಡ್ತಿರುವುದು ಸರಿಯಲ್ಲ’ ಎಂದು ಖಾರವಾಗಿ ನುಡಿದರು.
‘ಚೇತನ್ ಅವರೇ ನಿಮ್ಮ ಒಡಕು ಬಾಯಿ, ಹಿಂದೂ ವಿರೋಧಿ ಬಾಯಿ, ದೇಶದ್ರೋಹಿ ಬಾಯಿಯನ್ನು ಸ್ವಲ್ಪ ಮುಚ್ಚಬೇಕು. ನೀವು ಒಳ್ಳೆಯ ನಟರಾಗಿರಬೇಕೇ ವಿನಾ ಹಿಂದೂ ವಿರೋಧಿ, ದೇಶದ್ರೋಹಿ ಅಥವಾ ಸಮಾಜ ಕಂಟಕದ ಕೆಲಸವನ್ನು ನಿಮ್ಮಿಂದ ಆಪೇಕ್ಷಿಸಿರಲಿಲ್ಲ. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ. ಆದಿವಾಸಿ, ಬುಡಕಟ್ಟು ಜನಾಂಗ ಅಂತಾ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಬೇಡಿ’ ಎಂದು ತಿರುಗೇಟು ನೀಡಿದರು.
‘ರಾಮಮಂದಿರದ ಒಂದು ಕಲ್ಲು ಕೂಡಾ ಅಲ್ಲಾಡಿಸೋಕೆ ಆಗಲ್ಲ’
‘ಅಯೋಧ್ಯ ರಾಮಮಂದಿರ ನಿರ್ಮಾಣ ಆಗುತ್ತಿರುವುದು ಕೆಲವು ಮುಸ್ಲಿಮರಿಗೆ ಸಹಿಸಲು ಆಗುತ್ತಿಲ್ಲ. ಪಾಕಿಸ್ತಾನದಲ್ಲಿದ್ದುಕೊಂಡು ಸಂಚು ರೂಪಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಕೂಡಾ ಸಪೋರ್ಟ್ ಮಾಡುತ್ತಿದೆ. ಆದರೆ, ರಾಮಮಂದಿರದ ಒಂದು ಕಲ್ಲನ್ನು ಕೂಡಾ ಅಲ್ಲಾಡಿಸೋಕೆ ಆಗಲ್ಲ. ನಿಮ್ಮ ಆಟ ಇನ್ನು ಮುಂದೆ ನಡೆಯಲ್ಲ. ಹಿಂದೂ ಸಮಾಜ ಈಗ ಜಾಗೃತಿಯಾಗಿದೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
‘ರಾಮ ಮಂದಿರವನ್ನೇ ಸ್ಫೋಟ ಮಾಡಿ ಬಾಬರಿ ಮಸೀದಿ ನಿರ್ಮಾಣಕ್ಕೆ ಸಂಚು ರೂಪಿಸಿದ್ರು. ಇವರ ಕನಸು ನನಸಾಗದಂತೆ ತಡೆದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುವೆ. ಓವೈಸಿ ಕೂಡಾ ಓಪನ್ ಆಗಿ ಹೇಳಿದ್ದಾರೆ. ನೀವು ಎಷ್ಟೇ ಮಂದಿರ ಕಟ್ಟಿದರೂ ನಾವು ಅವುಗಳನ್ನು ತೆಗೆದು ಮಸೀದಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಇಂಥವರನ್ನು ಗಲ್ಲಿಗೇರಿಸಬೇಕು. ಎಲ್ಲವನ್ನೂ ಬಯಲಿಗೆಳೆದು ಪಿಎಫ್ಐನ ಮುಸ್ಲಿಂ ಮಾನಸಿಕತೆ ಬಣ್ಣವನ್ನು ಹೊರಹಾಕಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.